ಕೈಗಡಿ ಬಳಿ ಹೊಳೆಯಲ್ಲಿ ಮುಳುಗಿ ಕಾಣೆಯಾದ ಯುವಕನಿಗಾಗಿ ಬುಧವಾರ ದಿನವಿಡೀ ಶೋಧಕಾರ್ಯ ನಡೆದಿದ್ದು, ಸಂಜೆಯವರೆಗೂ ಆತ ಪತ್ತೆಯಾಗಿಲ್ಲ.
ಯಲ್ಲಾಪುರದ ಸಬಗೇರಿ ನಿವಾಸಿ ಸಾಗರ್ ರಾಮಾ ದೇವಾಡಿಗ (23) ಎಂಬ ಯುವಕ ತನ್ನ ಸ್ನೇಹಿತರಾದ ದಿನೇಶ, ಪುನಿತ್, ವಿನೋದ ಎಂಬವರ ಜೊತೆ ಸೇರಿ ಬರ್ತಡೆ ಪಾರ್ಟಿ ಮಾಡಲು ಕೈಗಡಿ ಬಳಿಯ ಹೊಳೆಗೆ ಹೋಗಿದ್ದರು.
ಸಂಜೆ ಸುಮಾರು 4.30 ರ ವೇಳೆಗೆ ಸಾಗರ್ ರಾಮಾ ದೇವಾಡಿಗ ಹೊಳೆಯಲ್ಲಿ ನೀರಿಗೆ ಇಳಿದಿದ್ದು, ಆಕಸ್ಮಿಕವಾಗಿ ಹೊಳೆಯಲ್ಲಿ ಮುಳುಗಿ ಕಾಣೆಯಾಗಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಸ್ಥಳೀಯರ ನೆರವಿನೊಂದಿಗೆ ಶೋಧ ನಡೆಸಿದ್ದರು. ಬುಧವಾರ ಬೆಳಗ್ಗೆಯಿಂದ ಮತ್ತೆ ಶೋಧ ಕಾರ್ಯ ಮುಂದುವರಿದಿದ್ದು, ಸಂಜೆಯವರೆಗೂ ಶೋಧಿಸಿದರೂ ಸಾಗರ್ ಪತ್ತೆಯಾಗಿಲ್ಲ.
ಸ್ಥಳೀಯ ಸಿದ್ದಿ ಸಮುದಾಯದವರು ಕತ್ತಲೆಯಾದರೂ ಶೋಧಕ್ಕಾಗಿ ಶ್ರಮಿಸುತ್ತಿದ್ದಾರೆ. ಸಾಗರ್ ಕಾಣೆಯಾದ ಕುರಿತು ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







