ಕೈಗಡಿ ಬಳಿ ಹೊಳೆಯಲ್ಲಿ ಮುಳುಗಿ ಕಾಣೆಯಾದ ಯುವಕ ಗುರುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.
ಯಲ್ಲಾಪುರದ ಸಬಗೇರಿ ನಿವಾಸಿ ಸಾಗರ್ ರಾಮಾ ದೇವಾಡಿಗ (23) ಎಂಬ ಯುವಕ ಮಂಗಳವಾರ ತನ್ನ ಸ್ನೇಹಿತರಾದ ದಿನೇಶ, ಪುನಿತ್, ವಿನೋದ ಎಂಬವರ ಜೊತೆ ಸೇರಿ ಬರ್ತಡೆ ಪಾರ್ಟಿ ಮಾಡಲು ಕೈಗಡಿ ಬಳಿಯ ಹೊಳೆಗೆ ಹೋಗಿದ್ದರು.
ಸಂಜೆ ಸುಮಾರು 4.30 ರ ವೇಳೆಗೆ ಸಾಗರ್ ರಾಮಾ ದೇವಾಡಿಗ ಹೊಳೆಯಲ್ಲಿ ನೀರಿಗೆ ಇಳಿದಿದ್ದು, ಆಕಸ್ಮಿಕವಾಗಿ ಹೊಳೆಯಲ್ಲಿ ಮುಳುಗಿ ಕಾಣೆಯಾಗಿದ್ದ.
ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಸ್ಥಳೀಯರ ನೆರವಿನೊಂದಿಗೆ ಶೋಧ ನಡೆಸಿದ್ದರು. ಬುಧವಾರ ಬೆಳಗ್ಗೆಯಿಂದ ಮತ್ತೆ ಶೋಧ ಕಾರ್ಯ ಮುಂದುವರಿದಿದ್ದು, ಇಡೀ ಶೋಧಿಸಿದರೂ ಸಾಗರ್ ಪತ್ತೆಯಾಗಿರಲಿಲ್ಲ.
ಸ್ಥಳೀಯರಾದ ಗಣಪ ಸಿದ್ದಿ, ರಾಮಾ ಸಿದ್ದಿ, ವೆಂಕ ಸಿದ್ದಿ ಹಾಗೂ ನಾರಾಯಣ ಸಿದ್ದಿ ಅವರ ನೇತೃತ್ವದ ತಂಡ ಬುಧವಾರ ರಾತ್ರಿಯಿಡೀ ಶೋಧ ಕಾರ್ಯ ನಡೆಸಿದ್ದು, ಗುರುವಾರ ಬೆಳಗ್ಗೆ 6 ರ ಹೊತ್ತಿಗೆ ಸಾಗರ್ ಶವವಾಗಿ ದೊರಕಿದ್ದಾನೆ. ಮುಳುಗಿದ ಸ್ಥಳದಿಂದ ಅರ್ಧ ಕಿ.ಮೀ ದೂರದಲ್ಲಿ ಶವ ಪತ್ತೆಯಾಗಿದೆ.







