ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಮಂಗಳವಾರ ಉದ್ಘಾಟನೆಗೊಂಡಿದೆ. ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡುವ ಶಾಸಕರ ಕಾರ್ಯಾಲಯದ ಪ್ರಕಟಣೆಯೊಂದು ಹುಟ್ಟು ಹಾಕಿದ್ದ ಚರ್ಚೆಗೆ, ಶಾಸಕ ಶಿವರಾಮ ಹೆಬ್ಬಾರ ಅವರು ತಮ್ಮ ಭಾಷಣದ ಮೂಲಕ ಉತ್ತರ ನೀಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಆಹ್ವಾನಿಸುವ ಪ್ರಕಟಣೆಯೊಂದನ್ನು ಸೋಮವಾರ ಸಂಜೆ ಶಾಸಕರ ಕಾರ್ಯಾಲಯದಿಂದ ಹೊರಡಿಸಲಾಗಿತ್ತು. ಅದರಲ್ಲಿ ‘ಕಿರವತ್ತಿಯ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವರು ಆಗಮಿಸಲಿದ್ದು, ಪಕ್ಷದ ವಿವಿಧ ಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು’ ನಮೂದಿಸಲಾಗಿತ್ತು.
ಸದ್ಯ ಶಾಸಕ ಶಿವರಾಮ ಹೆಬ್ಬಾರ ಅವರು ಯಾವ ಪಕ್ಷದಲ್ಲೂ ಇಲ್ಲ. ಬಿಜೆಪಿಯಿಂದ ಉಚ್ಛಾಟಿತರಾಗಿದ್ದಾರೆ. ಕಾಂಗ್ರೆಸ್ ಪಕ್ಷವನ್ನಂತೂ ಸೇರಿಲ್ಲ. ಹೀಗಿರುವಾಗ ಶಾಸಕರು ಯಾವ ಪಕ್ಷದವರನ್ನು ಆಹ್ವಾನಿಸಿದರು ಎಂಬ ಪ್ರಶ್ನೆ ಮೂಡಿದ್ದು, ಈ ಪ್ರಕಟಣೆ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು. ಯಾವ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಎಂಬ ವಿಚಾರದ ಚರ್ಚೆ ಜಾಲತಾಣದಲ್ಲಿ ಸ್ವಾರಸ್ಯಕರವಾಗಿ ನಡೆದಿತ್ತು.
ಶಾಸಕರ ಒಲವು ಕಾಂಗ್ರೆಸ್ ನತ್ತ ಇರುವುದರಿಂದ ಕಾಂಗ್ರೆಸ್ ಕಾರ್ಯಕರ್ತರನ್ನೇ ಆಹ್ವಾನಿಸಿರಬಹುದೆಂದು ಕೆಲವರು ಆಡಿಕೊಂಡರೆ, ಶಾಸಕರು ಸದ್ಯ ಯಾವ ಪಕ್ಷದಲ್ಲೂ ಇಲ್ಲದೇ ಇರುವುದರಿಂದ ಎರಡೂ ಪಕ್ಷದವರನ್ನೂ ಆಹ್ವಾನಿಸಿರಬಹುದು ಎಂಬುದು ಇನ್ನೂ ಕೆಲವರ ವಾದವಾಗಿತ್ತು.
ಈ ಗೊಂದಲಕ್ಕೆ ಶಾಸಕರು ಕಿರವತ್ತಿಯ ಸಭೆಯಲ್ಲಿನ ತಮ್ಮ ಭಾಷಣದಲ್ಲಿ ತೆರೆ ಎಳೆದರು. ಆಸ್ಪತ್ರೆ ಕಟ್ಟಡದ ಉದ್ಘಾಟನಾ ಸಭೆಯಲ್ಲಿ ಮಾತನಾಡುವಾಗ ಶಾಸಕ ಶಿವರಾಮ ಹೆಬ್ಬಾರ ಅವರು ‘ನಮ್ಮ ಪಕ್ಷದ ಮುಖಂಡ ವಿಜಯ ಮಿರಾಶಿ ಅವರೇ’ ಎಂದು ಸಂಬೋಧಿಸಿದರು. ವಿಜಯ ಮಿರಾಶಿ ಅವರು ಜಿಲ್ಲಾ ಕಾಂಗ್ರೆಸ್ ಮುಖಂಡರಾಗಿರುವುದರಿಂದ, ಹೆಬ್ಬಾರ ಅವರು ‘ನಮ್ಮ ಪಕ್ಷ’ ಎಂದಿರುವುದು ಕಾಂಗ್ರೆಸ್ ಗೆ ಎಂಬುದು ಸ್ಪಷ್ಟವಾಗಿದೆ. ಶಾಸಕರ ಕಾರ್ಯಾಲಯದ ಪ್ರಕಟಣೆಯಲ್ಲಿ ಹೇಳಿದ ‘ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು’ ಎಂಬ ಶಬ್ದವೂ ಕಾಂಗ್ರೆಸ್ ಪಕ್ಷವನ್ನು ಉದ್ದೇಶಿಸಿಯೇ ಆಡಿದ್ದು ಎಂಬ ವಿಚಾರವೂ ಸ್ಪಷ್ಟವಾಗಿದೆ.
ಶಾಸಕರು ಕಾಂಗ್ರೆಸ್ ಗೆ ಸೇರುತ್ತಾರೆ ಎಂಬ ವದಂತಿ ಮೊದಲಿನಿಂದಲೂ ಕೇಳಿ ಬರುತ್ತಿದ್ದರೂ, ಅದಕ್ಕೆ ಈ ವಿಚಾರ ಇನ್ನಷ್ಟು ಪುಷ್ಟಿ ನೀಡಿದೆ.







