ಪೋಷಕರ ನಿರೀಕ್ಷೆಗಳು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಬೀರುವ ಪರಿಣಾಮಗಳು ಎಂಬ ವಿಷಯದ ಕುರಿತು ಸಂಶೋಧನೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕ ಕೆ. ನಾಗರಾಜ ಹೆಗಡೆ ಚಿಕ್ಕೊರಗಿ ಹಾಗೂ ಯೆರ್ಮಾಳದ ಶ್ರೀಮತಿ. ಅನಿತಾ ಸುರೇಶ್ ಶೆಟ್ಟಿ ಪಿ.ಯು. ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಪ್ರಥ್ವೀಶ್ ಯು. ಶೆಟ್ಟಿ ಅವರು ಸಂಯುಕ್ತವಾಗಿ ನಡೆಸಿದ ಸಂಶೋಧನಾತ್ಮಕ ಲೇಖನ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿದೆ.
ಪೋಷಕರ ನಿರೀಕ್ಷೆಗಳು ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಬೀರುವ ಪರಿಣಾಮಗಳು ಕುರಿತು ಜಂಟಿಯಾಗಿ ಸಂಶೋಧನೆ ನಡೆಸಿದ ಈ ಇಬ್ಬರು ಉಪನ್ಯಾಸಕರು, ಪೋಷಕರ ಶೈಕ್ಷಣಿಕ ನಿರೀಕ್ಷೆಗಳು ವಿದ್ಯಾರ್ಥಿಗಳ ಪಾಠ್ಯಪ್ರದರ್ಶನ ಹಾಗೂ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ವಿಷಯವನ್ನು ವಿಶ್ಲೇಷಿಸಿದ್ದಾರೆ. ಪೋಷಕರ ಸಮಂಜಸ ನಿರೀಕ್ಷೆಗಳು ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಸಾಧನೆಗೆ ಪೂರಕವಾಗಿದ್ದರೆ, ಅತಿಯಾದ ನಿರೀಕ್ಷೆಗಳು, ಒತ್ತಡ, ಆತಂಕ ಮತ್ತು ದಣಿವು ಉಂಟು ಮಾಡಬಹುದೆಂದು ಈ ಸಂಶೋಧನೆ ಹೇಳಿದೆ.
ಸಂಶೋಧನೆಯಲ್ಲಿ ವಿವಿಧ ಅಧ್ಯಯನಗಳನ್ನು ಪರಾಮರ್ಶಿಸಿ, ಭಾರತೀಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿನ ಪೋಷಕ-ವಿದ್ಯಾರ್ಥಿ ಸಂವಹನದ ತಾರತಮ್ಯವನ್ನೂ ವಿಶ್ಲೇಷಿಸಲಾಗಿದೆ. ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಮನೋಭಾವವನ್ನು ಅರ್ಥಮಾಡಿಕೊಂಡು, ಪ್ರೋತ್ಸಾಹದಾಯಕ ವಾತಾವರಣ ನಿರ್ಮಿಸಬೇಕೆಂಬ ಸಲಹೆಯನ್ನು ಸಂಶೋಧನೆ ನೀಡಿದೆ. ಈ ಸಂಶೋಧನೆಯು ಪೋಷಕರು ತಮ್ಮ ಮಕ್ಕಳಿಗೆ ನೀಡುವ ನಿರೀಕ್ಷೆಗಳನ್ನು ಸಮತೋಲನದಿಂದ ವ್ಯಕ್ತಪಡಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ.
ಈ ಜಂಟಿ ಸಂಶೋಧನಾ ಲೇಖನ ಅಂತಾರಾಷ್ಟ್ರೀಯ ಮಟ್ಟದ Poornaprajna International Journal of Teaching and Research Case Studies (PIJTRCS) ಪತ್ರಿಕೆಯಲ್ಲಿ ಪ್ರಕಟವಾಗಿದೆ. OpenAIRE ಮತ್ತು Google Scholarನಲ್ಲೂ ಸೂಚ್ಯಂಕಿತವಾಗಿದೆ.







