ಬ್ಯಾಡಗಿ: ಪಟ್ಟಣದ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ ಗುರುವಾರ ಹೊಸ ಮೆಣಸಿನಕಾಯಿ chili ಬಂದಿರುವುದು ವರ್ತಕರಲ್ಲಿ ಸಂತಸ ಮೂಡಿದೆ. ಬರದ ಛಾಯೆ ಮಧ್ಯೆಯೂ ಮೆಣಸಿನಕಾಯಿ ಆವಕ ಹೆಚ್ಚಳ ಸಾಧ್ಯತೆ ಕಂಡುಬಂದಿದೆ.
ಇಲ್ಲಿನ ಮಾರುಕಟ್ಟೆಗೆ ದೀಪಾವಳಿ ಹೊತ್ತಿಗೆ ಹೊಸ ಮೆಣಸಿನಕಾಯಿ ಸಲು ಬರುವುದು ವಾಡಿಕೆ. ಆದರೆ, ಈ ಬಾರಿ ಶ್ರಾವಣ ಮಾಸ ಎರಡನೇ ವಾರವೇ ಆಂಧ್ರಪ್ರದೇಶ ಹಾಗೂ ಬಳ್ಳಾರಿ ಗಡಿ ಪ್ರದೇಶದ ರೈತರು ಹೊಸ ಮೆಣಸಿನಕಾಯಿ ಬೆಳೆ ತಂದಿರುವುದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ವರ್ತಕ ಮಹದೇವಪ್ಪ ಕೆಂಚನಗೌಡ್ರ ಅವರ ದಲಾಲಿ ಅಂಗಡಿಯಲ್ಲಿ ಆಂಧ್ರಪ್ರದೇಶದ ರೈತರು ತಂದು ಟೆಂಡರ್ಗಿಟ್ಟಿದ್ದ 41 ಚೀಲಗಳ ಮೆಣಸಿನಕಾಯಿ ಲಾಟ್ ಕ್ವಿಂಟಾಲ್ಗೆ 50 ಸಾವಿರ ರೂಪಾಯಿಯಂತೆ ಮಾರಾಟವಾಗಿದೆ.
ಉತ್ತರ ಕರ್ನಾಟಕದ ಬಹುತೇಕ ತಾಲೂಕಿನಲ್ಲಿ ಬರದ ಪರಿಸ್ಥಿತಿಯಿದೆ. ಮಳೆ ಕೊರತೆಯಿಂದ ಬೆಳೆ ಕಾಣದೇ ರೈತರು ಕಂಗಾಲಾಗಿದ್ದಾರೆ. ಆದರೆ, ಮೆಣಸಿನಕಾಯಿ ಬೆಳೆಗೆ ಅಷ್ಟೇನು ತೊಂದರೆಯಾಗಿಲ್ಲ ಎಂಬ ಮಾಹಿತಿ ಇದೆ.
ತುಂಗಭದ್ರಾ ಅಣೆಕಟ್ಟಿನಲ್ಲಿ ನೀರು ಸಂಗ್ರಹವಾಗಿರುವುದರಿಂದ ರೈತ ಸಮೂಹದಲ್ಲಿ ಬೆಳೆಯ ಭರವಸೆ ಮೂಡಿದೆ. ಕೊಳವೆ ಬಾವಿ, ಕಾಲುವೆ ನೀರು ಆಶ್ರಯಿಸಿ ಮೆಣಸಿನಕಾಯಿ ಸಸಿ ನಾಟಿ ಮಾಡಿದ್ದಾರೆ. ಬರಗಾಲದಲ್ಲಿ ಬೇರೆ ಬೆಳೆಗಳು ಕೈಕೊಟ್ಟರೂ ಮೆಣಸಿನಕಾಯಿ ಕೈಹಿಡಿಯಲಿವೆ ಎನ್ನುವ ವಾತಾವರಣ ಮೂಡಿದೆ. ಕಳೆದ ವಾರ ಕ್ವಿಂಟಾಲ್ಗೆ 70 ಸಾವಿರ ಗರಿಷ್ಠ ಬೆಲೆ ಲಭಿಸಿದೆ. ಉತ್ತಮ ದರವು ರೈತರಲ್ಲಿ ಸಂತಸ ಇಮ್ಮಡಿಗೊಂಡಿದೆ.





