ಹಾನಗಲ್ಲ: ತಾಲೂಕಿನ ಗೊಂದಿ ಹಾಗೂ ಮಕರವಳ್ಳಿ ಗ್ರಾಮಗಳ ಸುತ್ತಮುತ್ತ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಬೃಹತ್ ಗಾತ್ರದ ಹೆಬ್ಬಾವು Python ಅನ್ನು ಉರಗ ರಕ್ಷಕ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ತಾಲೂಕಿನ ಗೊಂದಿ ಗ್ರಾಮದ ಸಿದ್ದಲಿಂಗಪ್ಪ ಪೂಜಾರ ಅವರ ಮನೆ ಹಿಂಭಾಗದ ಭತ್ತದ ಹುಲ್ಲಿನ ಬಣವೆಯಲ್ಲಿ 20 ಕೆ.ಜಿ. ತೂಕದ ಹೆಬ್ಬಾವು ಅಡಗಿರುವುದು ಗುರುವಾರ ಕಂಡುಬಂದಿತ್ತು. ಇದರಿಂದ ಮನೆಯವರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದರು.
ಹೆಬ್ಬಾವು ಇರುವ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಗಿರೀಶ ಕರಿದ್ಯಾವಣ್ಣನವರ ಹಾಗೂ ರಾಜು ಅವರು ಕಾರ್ಯಾಚರಣೆ ನಡೆಸಿ ಹೆಬ್ಬಾವು ಅನ್ನು ಯಾವುದೇ ಅಪಾಯವಾಗದಂತೆ ರಕ್ಷಿಸಿದರು. ಬಳಿಕ ಹೆಬ್ಬಾವು ಅನ್ನು ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಯಿತು.
ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದರಿಂದ ಕೆಲಕಾಲ ಗೊಂದಿ ಹಾಗೂ ಮಕರವಳ್ಳಿ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಉರಗಪ್ರೇಮಿಗಳ ಸಮಯೋಚಿತ ಕಾರ್ಯಾಚರಣೆಯಿಂದ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.






