ಹಾವೇರಿ: ಮಳೆ ಕೊರತೆಯಿಂದ ಬೆಳೆ ಕೈಕೊಟ್ಟಿದ್ದು, ಸಾಲದ ಹೊರೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾಡಿದ ಸಾಲ ತೀರಿಸಲು ಇದೀಗ ತಮ್ಮ ಜೀವನಾಧಾರವಾಗಿದ್ದ ಜೋಡಿ ಎತ್ತುಗಳನ್ನೇ ಮಾರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಹಾವೇರಿ ಜಾನುವಾರು ಮಾರುಕಟ್ಟೆಗೆ ನೂರಾರು ರೈತರು ತಮ್ಮ ಜೋಡಿ ಎತ್ತುಗಳನ್ನು ಮಾರಾಟಕ್ಕೆ ತರುತ್ತಿದ್ದಾರೆ. ಆದರೆ, ಎತ್ತುಗಳನ್ನು ಖರೀದಿಸಲು ರೈತರು ಹಾಗೂ ಜಾನುವಾರು ಸಾಕಾಣಿಕೆದಾರರು ಮುಂದೆ ಬಾರದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ವಾರಗಟ್ಟಲೆ ಮಾರುಕಟ್ಟೆಯಲ್ಲಿ ಎತ್ತುಗಳನ್ನು ಇಟ್ಟುಕೊಂಡರೂ ಖರೀದಿದಾರರು ಸಿಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
“ಜೀವನ ನಡೆಸಲು ಹಣವಿಲ್ಲ. ಮಾಡಿದ ಸಾಲ ತೀರಿಸಲು ಎತ್ತುಗಳನ್ನು ಮಾರಾಟಕ್ಕೆ ತಂದಿದ್ದೇವೆ. ಆದರೆ ಎತ್ತುಗಳನ್ನು ಖರೀದಿಸುವವರೇ ಇಲ್ಲ. ನಮ್ಮ ಬಳಿ ಹಣವಿಲ್ಲ, ಬೆಳೆ ಇಲ್ಲ. ನಮ್ಮ ಎತ್ತುಗಳನ್ನು ಖರೀದಿಸಬೇಕಾದರೂ ರೈತರೇ ಬರಬೇಕು. ಆದರೆ ಮಳೆ ಕೊರತೆಯಿಂದ ರೈತರಿಗೂ ಬೆಳೆ ಬಂದಿಲ್ಲ. ಹೀಗಾಗಿ ನಮ್ಮ ಎತ್ತುಗಳನ್ನು ಕೊಳ್ಳಲು ಬೇರೆ ರೈತರೂ ಮುಂದೆ ಬರುತ್ತಿಲ್ಲ” ಎಂದು ರೈತರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಜೋಡಿ ಎತ್ತುಗಳಿಗೆ ₹60 ಸಾವಿರದಿಂದ ₹80 ಸಾವಿರದವರೆಗೆ ಬೆಲೆ ನಿಗದಿಪಡಿಸಿದರೂ ಖರೀದಿದಾರರು ಸಿಗುತ್ತಿಲ್ಲ ಎನ್ನುವುದು ರೈತರ ಅಳಲು. ಇನ್ನು ಕೆಲ ರೈತರು ₹1.50 ಲಕ್ಷದಿಂದ ₹2 ಲಕ್ಷದವರೆಗೆ ಮೌಲ್ಯ ಹೊಂದಿರುವ ಎತ್ತುಗಳನ್ನು ಅರ್ಧ ಬೆಲೆಗೆ ನೀಡಲು ಸಿದ್ಧವಿದ್ದರೂ, ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ಹೇಳಿದ್ದಾರೆ.
ಬರಗಾಲದಿಂದ ಬೆಳೆ ನಷ್ಟ, ಒಂದೆಡೆ ಸಾಲದ ಒತ್ತಡ, ಮತ್ತೊಂದೆಡೆ ಎತ್ತುಗಳನ್ನು ಮಾರಾಟ ಮಾಡಿದರೂ ಹಣ ಕೈಗೆ ಸಿಗದ ಪರಿಸ್ಥಿತಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಜೀವನೋಪಾಯಕ್ಕೆ ನೆರವಾಗುತ್ತಿದ್ದ ಜೋಡಿ ಎತ್ತುಗಳನ್ನು ಮಾರಾಟ ಮಾಡಿ ಸಾಲ ತೀರಿಸಿಕೊಳ್ಳೋಣ ಎಂದು ಮಾರುಕಟ್ಟೆಗೆ ಬಂದ ರೈತರಿಗೆ ಖರೀದಿದಾರರು ಸಿಗದಿರುವುದು ಅವರ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ.
“ನಮ್ಮ ಗೋಳು ಯಾರಿಗೆ ಹೇಳೋಣ?” ಎಂದು ರೈತರು ಬೇಸರ ವ್ಯಕ್ತಪಡಿಸಿದ್ದು, ಬರಗಾಲದ ಸಂಕಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ಮತ್ತು ನೆರವು ನೀಡಬೇಕು ಎಂದು ಆಗ್ರಹಿಸಿದ್ದಾರೆ.




