ಯಕ್ಷಗಾನ ಕ್ಷೇತ್ರಕ್ಕೆ ಉತ್ತರ ಕನ್ನಡದ ಘಟ್ಟದ ಮೇಲಿನ ಅದರಲ್ಲೂ ಮಲೆನಾಡಿನ ಕೊಡುಗೆ ಅತ್ಯಲ್ಪವೇನು ಅಲ್ಲ. ಅನೇಕ ಪ್ರತಿಭಾ ಸಂಪನ್ನರಿದ್ದರೂ ಬೇರೆ ಬೇರೆ ಕಾರಣಗಳಿಂದಾಗಿ ಎಲೆಮರೆಯ ಕಾಯಿಗಳಾಗಿಯೇ ಇದ್ದದ್ದು ಹೊಸತೇನಲ್ಲ. ಇಂತಹ ಸಂಪನ್ನರಲ್ಲಿ 60ರ ದಶಕದೀಚೆಗೆ ಯಕ್ಷಗಾನದ ಸಾಂಪ್ರದಾಯಿಕ ಕಲಾಪ್ರಪಂಚದಲ್ಲಿ ತಮ್ಮ ಹೆಜ್ಜೆಯನ್ನ ಗುರುತಿಸಿಕೊಂಡವರು ಬಿದ್ರೆಮನೆ ಸಹೋದರರು ಎಂದೇ ಕರೆಯಲ್ಪಟ್ಟ ವೆಂಕಟ್ರಮಣ ಗಾಂವ್ಕಾರ ಮತ್ತು ಮಹಾಬಲೇಶ್ವರ ಗಾಂವ್ಕಾರ.
ಯಲ್ಲಾಪುರ ತಾಲೂಕಿನ ಚಿಮ್ಮನಳ್ಳಿ ಗ್ರಾಮದ ಬಿದ್ರೆಮನೆ ಕುಟುಂಬ ಯಕ್ಷಪ್ರಪಂಚಕ್ಕೆ ಅನಾದಿಕಾಲದಿಂದಲೂ ಹೊಂದಿಕೊoಡಿದೆ. ಎರಡು ತಲೆಮಾರಿನ ಹಿಂದೆ ಬಾರೆ ಗೋಪ ಭಟ್ಟ ಹಾಗೂ ಶಣ್ಣ ಗಾಂವ್ಕಾರ ಎಂದೇ ಖ್ಯಾತರಾದ ಕಲಾವಿದರಿಬ್ಬರನ್ನು ಈಗಲೂ ಅನೇಕರು ಸ್ಮರಿಸುತ್ತಾರೆ. ಬಾರೆ ಗೋಪ ಭಟ್ಟರು ಖಳನಾಯಕ ಪಾತ್ರಗಳಲ್ಲಿ ಮಿಂಚಿದ್ದರೆ ಶಣ್ಣ ಗಾಂವ್ಕಾರ್ರವರು ಮಹಿಳಾ ಪಾತ್ರಗಳನ್ನು ಮಾಡುತ್ತಿದ್ದರು. ಆದರೆ ಈ ಇಬ್ಬರು ಕಲಾವಿದರು ಅಲ್ಪಾಯುಷಿಗಳಾಗಿಯೇ ಸಂದುಹೋದರು. ಬಾರೆ ಗೋಪ ಭಟ್ಟರು ರಂಗದಲ್ಲಿದ್ದಾಗಲೇ ಕಾರಣಾಂತರದಿoದ ತಲೆಯ ಮೇಲಿನ ಕಿರೀಟ ಜಾರಿ ರಂಗದಲ್ಲಿ ಬಿದ್ದಿತ್ತಂತೆ. ತಲೆಯ ಕಿರೀಟ ನೆಲಕ್ಕೆ ಬಿದ್ದರೆ ಅರ್ಧಾಯುಷ್ಯದಲ್ಲಿಯೇ ಸಾಯುತ್ತಾರೆ ಎಂಬ ನಂಬಿಕೆಗೆ ಇದೊಂದು ದ್ರಷ್ಟಾಂತವಾಯಿತು! ಇದೇ ಬಾರೆ ಗೋಪಭಟ್ಟರ ನಾಲ್ವರು ಮಕ್ಕಳಲ್ಲಿ ವೆಂಕಟ್ರಮಣ ಮತ್ತು ಮಹಾಬಲೇಶ್ವರ ಗಾಂವ್ಕಾರರು.
ಮೂಲದಲ್ಲಿ ಯಲ್ಲಾಪುರದ ಬಾರೆ ಗ್ರಾಮದಲ್ಲಿದ್ದು ಆ ನಂತರ ಹೊನ್ನಗದ್ದೆಗೆ ಸ್ಥಳಾಂತರಗೊoಡು ಮುಂದಿನ ದಿನಗಳಲ್ಲಿ ಬಿದ್ರೆಮನೆಯಲ್ಲಿ ನೆಲೆಗೊಂಡದ್ದು ಈ ಕುಟುಂಬದ ಇತಿಹಾಸ. ಆರ್ಥಿಕವಾಗಿ ಶೈಕ್ಷಣಿಕವಾಗಿ ಬಡತನವಿದ್ದರೂ ಸಾಂಸ್ಕೃತಿಕವಾಗಿ ಬಡತನವಿರಲಿಲ್ಲ. ವಿಶೇಷವಾಗಿ ಗುರು ಮುಖೇನ ಯಕ್ಷಗಾನ ಪಾಠವಾಗದಿದ್ದರೂ ಆ ಕಾಲದ ಹಿರಿಯ ಯಕ್ಷಗಾನ ಕಲಾವಿದರಾದ ದುಂಡಿ ಶಿವರಾಮ ಭಟ್ಟರು, ಅಟ್ಟದಬೈಲ್ ಸುಬ್ರಾಯಜ್ಜರು, ಬಳಗಾರ ಕುಪ್ಪನಮನೆ ಭಾಗವತರೇ ಮೊದಲಾದವರಿಂದ ಪ್ರಭಾವಿತರಾಗಿ ಯಕ್ಷಗಾನ ವೇಷಗಳನ್ನು ಮಾಡತೊಡಗಿದರು. ಈ ಇಬ್ಬರ ಹಿರಿಯ ಚಂದ್ರಶೇಖರ ಗಾಂವ್ಕಾರರು ಕೆಲವಷ್ಟೇ ದಿನ ಮದ್ದಲೆಗಾರರಾಗಿದ್ದರಂತೆ. ಅಣ್ಣ ವೆಂಕಟ್ರಮಣ ಗಾಂವ್ಕಾರ ವಿಶೇಷವಾಗಿ ವೇಷಗಾರಿಕೆಯಲ್ಲಿ ಪ್ರಾವೀಣ್ಯತೆಯನ್ನು ಹೊಂದಿದರೆ, ತಮ್ಮ ಮಹಾಬಲೇಶ್ವರ ಗಾಂವ್ಕಾರ ನೃತ್ಯ, ಅಭಿನಯ ಹಾಗೂ ಮದ್ದಳೆಗಾರಿಕೆಯಲ್ಲಿಯೂ ಸಹಿತ ಹಿಡಿತವನ್ನು ಹೊಂದಿದ್ದರು. ಇಬ್ಬರದೂ ಆಕರ್ಷಕ ಅಂಗಸೌಷ್ಠವ ಮತ್ತು ಉತ್ತಮ ಸ್ವರಭಾರ. ಸಂಘಟಕರಿಗೆ ಕಿರಿಕಿರಿಯಾಗದ ಮೃದು ಮತ್ತು ಹೊಂದಾಣಿಕೆಯ ಸ್ವಭಾವ. ಯಾವುದೇ ಪಾತ್ರ ಕೊಟ್ಟರೂ ಅನ್ಯಮಾತಿಲ್ಲದೆ ವೇಷ ಮಾಡುವ ಮನೋಭಾವ. ಆ ಕಾಲದಲ್ಲಿ ಈಗಿನಂತೆ ವೇಷಭೂಷಣಗಳ ಸಂಗ್ರಹವನ್ನು ಆಯೋಜಕರು ಒದಗಿಸುವ ಪರಿಪಾಠವಿರಲಿಲ್ಲ. ಸುಮಾರು 30 ಕೆಜಿಗಿಂತಲೂ ಭಾರವಿರುವ ವೇಷ ಸಂಗ್ರಹಗಳನ್ನು ಸುಮಾರು 15ರಿಂದ 20ಕಿಮೀ ತಲೆಯ ಮೇಲೆ ಹೊತ್ತು ನಡೆದುಕೊಂಡೆ ಹೋಗಿ ವೇಷಮಾಡಿ ಬಂದಿರುವುದೇ ಹೆಚ್ಚು. ಸಂಭಾವನೆಯ ವಿಷಯವಂತೂ ಮಾತನಾಡದಿರುವುದೇ ಲೇಸು. ಮನೆಗೆ ಬಂದರೆ ನಿದ್ದೆಗೆಟ್ಟ ಕಣ್ಣುರಿ ಒಂದೆಡೆ, ನಡೆದು ಬಂದ ಕಾಲುರಿ ಇನ್ನೊಂದೆಡೆ, ಸಾಂಸಾರಿಕ ಸಮಸ್ಯೆಗಳ ಸರಮಾಲೆ ಮತ್ತೊಂದೆಡೆ, ಆಟ ಕುಣಿದು ತೋಟ ಹಾಳುಮಾಡಿಕೊಂಡರು ಎನ್ನುವ ದಾರಿಹೋಕರ ನುಡಿಗಳು ಇನ್ನೊಂದೆಡೆ. ಇದೆಲ್ಲದರ ಮಧ್ಯದಲ್ಲಿ ಮನೆತುಂಬ ಮಕ್ಕಳು.
ಆ ಕಾಲದಲ್ಲಿ ಪ್ರಚಲಿತವಿದ್ದ ಹೊನ್ನಗದ್ದೆ ಮೇಳ, ಅಣಲಗಾರ ಮೇಳ, ಕೊಡ್ಲಗದ್ದೆ ಮೇಳ, ಬಳಗಾರ ಮೇಳ, ತೆಲಂಗಾರ ಮೇಳ ಮುಂತಾದ ಮೇಳಗಳಲ್ಲಿ ಅನೇಕ ಪಾತ್ರಗಳನ್ನು ಮಾಡಿ ರಂಜಿಸಿದರು. ಮಹಾಬಲೇಶ್ವರ ಗಾಂವ್ಕಾರರು ದಿವಂಗತ ನಾರಾಯಣಪ್ಪ ಉಪ್ಪೂರು ಮತ್ತು ಪದ್ಮಶ್ರೀ ಚಿಟ್ಟಾಣಿಯವರಿದ್ದ ಅಮೃತೇಶ್ವರಿ ವೃತ್ತಿ ಮೇಳದಲ್ಲಿಯೂ ಕೆಲವು ಕಾಲ ಪ್ರತಿನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಅವಕಾಶಕ್ಕೆ ಕವಾಳೆ ಗಣಪತಿ ಭಾಗವತರನ್ನು ನೆನಪಿಸಿಕೊಳ್ಳಲೇಬೇಕು. ಆ ಕಾಲದ ಖ್ಯಾತ ಕಲಾವಿದರಾದ ಶಣ್ಣಣ್ಣ ಭಾಗವತ ಶಿಂಬಳಗಾರ್.ನರಸಿAಹ ಭಟ್ಟ ಜವಳೆಕೆರೆ, ಮಳಗಿಮನೆ ರಾಮಕೃಷ್ಣ ಹೆಗಡೆ , ಕುಪ್ಪನಮನೆ ಭಾಗವತರು, ರಾಮಚಂದ್ರ ಭಾಗವತ ಕವಾಳೆ ,ತಾರೀಕುಂಟೆ ಭಾಗವತರು , ಹರಿಮನೆ ಕೃಷ್ಣ ಭಾಗವತರು, ಕಲ್ಮನೆ ವೆಂಕಟ್ರಮಣ ಗಾಂವ್ಕಾರ, ಬಟ್ಲಗುಂಡಿ ಸಹೋದರರು, ನೆಲೆಪಾಲ್ ಈಶ್ವರ ಗಾಂವ್ಕಾರ, ದುಂಡಿ ಗಣಪತಿ ಭಟ್, ಅರಬೈಲ್ ವಿಶ್ವೇಶ್ವರ ಭಟ್, ದೂಪದಮನೆ ರಾಮಚಂದ್ರ ಗಾವ್ಕಾರ್, ಮಳವಳ್ಳಿ ನಾರಾಯಣ ಭಟ್ ಹೀಗೆ ಇನ್ನು ಅನೇಕ ಹಿರಿ -ಕಿರಿಯ ಕಲಾವಿದರೊಂದಿಗೆ ಯಕ್ಷಗಾನದ ಸಹಜೀವನವನ್ನು ನಡೆಸಿದರು.
ಪ್ರಸಕ್ತ 75 ವಸಂತ ದಾಟಿದ ಇಬ್ಬರೂ ವಿಶ್ರಾಂತ ಬದುಕಿನಲ್ಲಿದ್ದಾರೆ. ವೆಂಕಟ್ರಮಣ ಗಾವ್ಕಾರರ ಹಿರಿಯ ಮಗ ಪರಮೇಶ್ವರ ಕೃಷಿ ಮತ್ತು ವೈದಿಕದಲ್ಲಿದ್ದರೆ, ಎರಡನೇ ಮಗ ಸುಬ್ರಾಯ ಬಿದ್ರೆಮನೆ ಸಾಹಿತ್ಯ ಮತ್ತು ಪತ್ರಿಕಾ ಪ್ರಪಂಚದಲ್ಲಿ ಗುರುತಿಸಿಕೊಂಡಿದ್ದಾರೆ. ಮಹಾಬಲೇಶ್ವರ್ ಗಾಂವ್ಕಾರ ನಾಲ್ಕು ಗಂಡು ಮಕ್ಕಳಲ್ಲಿ ಭಾಸ್ಕರ ಗಾಂವ್ಕರ ಬಿದ್ರೆಮನೆ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಯಕ್ಷಗಾನದಲ್ಲೂ ಉತ್ತಮ ಕಲಾವಿದರಾಗಿದ್ದಾರೆ. ಕಿರಿಯ ಸಹೋದರ ನರಸಿಂಹ ಬಿದ್ರೆಮನೆ ಯಕ್ಷಗಾನದ ವೃತ್ತಿ ಮೇಳಗಳಲ್ಲಿ ಸಕ್ರಿಯರಾಗಿದ್ದಾರೆ. ಇವರಿಬ್ಬರು ಈ ತಲೆಮಾರಿನ ಯಕ್ಷಗಾನದ ಬಿದ್ರೇಮನೆ ಸಹೋದರರಾಗಿದ್ದಾರೆ.
ಒಂದು ವಿಸ್ಮಯವೆಂದರೆ 3 ತಲೆಮಾರಿನ ಕಾಲಘಟ್ಟದಲ್ಲಿ ಈ ಕುಟುಂಬದ ಎರಡೆರಡು ಸಹೋದರರು, ಬಿದ್ರೆಮನೆ ಸಹೋದರರೆಂಬ ಖ್ಯಾತಿಯೊಂದಿಗೆ ಈ ರಂಗಭೂಮಿಯಲ್ಲಿ ಕಾಣಿಸಿಕೊಂಡಿದ್ದಾರೆ.
* ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ.
Discussion about this post