2018ರಲ್ಲಿ ನಡೆದ ಅಪಘಾತದಲ್ಲಿ 29 ವರ್ಷದ ಭರತನಾಟ್ಯ ಶಿಕ್ಷಕಿ ಸೌಮ್ಯ ಭಟ್ಟ ಎಂಬಾತರು ಸಾವನಪ್ಪಿದ್ದು, ಕಾನೂನು ಹೋರಾಟ ಮಾಡಿದ ಅವರ ಪತಿ ದತ್ತಾತ್ರೇಯ ಭಟ್ಟ ಆ ಸಾವಿಗೆ ಕಾರಣವಾದ ಘಟಕದ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಆ ಬಸ್ಸನ್ನು ಅವರು ನ್ಯಾಯಾಲಯದ ಸುಪರ್ಧಿಗೆ ನೀಡಿದ್ದಾರೆ.
2018 ಅಕ್ಟೋಬರ್ 15ರಂದು ಬೆಳಿಗ್ಗೆ 11.45ಕ್ಕೆ ಕುಮಟಾದ ಸೌಮ್ಯಾ ಭಟ್ಟ ಅವರು ಕಡತೋಕಾದಿಂದ ಹೊನ್ನಾವರ ಕಡೆ ತೆರಳುತ್ತಿದ್ದರು. ಆಗ ಧರ್ಮಸ್ಥಳದಿಂದ ಹಾವೇರಿಗೆ ಹೋಗುತ್ತಿದ್ದ ಬಸ್ಸು ಅವರ ಜೀವ ತೆಗೆಯಿತು. ಹೊನ್ನಾವರದ ಎಮ್ಮೆಪೈಲ್ ಬಳಿ ಯಮರೂಪಿಯಾಗಿ ಬಂದ ಬಸ್ಸು ಸ್ಕೂಟಿಯಲ್ಲಿ ಹೋಗುತ್ತಿದ್ದ ಸೌಮ್ಯಾ ಭಟ್ಟರಿಗೆ ಗುದ್ದಿತ್ತು. ಆ ರಭಸಕ್ಕೆ ಶಿಕ್ಷಕಿ ಸೌಮ್ಯಾ ಭಟ್ಟ ಸ್ಥಳದಲ್ಲಿಯೇ ಸಾವನಪ್ಪಿದ್ದರು.
ಹಾವೇರಿ ಘಟಕಕ್ಕೆ ಸೇರಿದ ಬಸ್ಸು ಅದಾಗಿದ್ದು, ಸೌಮ್ಯಾ ಭಟ್ಟ ಅವರ ಪತಿ ದತ್ತಾತ್ರೇಯ ಭಟ್ಟ ಕಾನೂನು ಹೋರಾಟಕ್ಕೆ ಇಳಿಸಿದ್ದರು. ಸತತ ಐದುವರೆ ವರ್ಷ ಹೋರಾಟದ ನಂತರ ಮೃತರ ವಾರಸುದಾರರಿಗೆ 20 ಲಕ್ಷ ರೂ ಪರಿಹಾರ ವಿತರಿಸುವಂತೆ ನ್ಯಾಯಾಲಯ ಕೆಎಸ್ಆರ್ಟಿಸಿಗೆ ಆದೇಶಿಸಿತ್ತು. ಆದರೆ, ನಿಗಮದ ಅಧಿಕಾರಿಗಳು ಮಾತ್ರ ನೊಂದವರಿಗೆ ನ್ಯಾಯ ಒದಗಿಸಲು ಸಿದ್ಧರಿರಲಿಲ್ಲ.
ಹೀಗಾಗಿ ದತ್ತಾತ್ರೇಯ ಭಟ್ಟ ಅವರು ತಮ್ಮ ಕಾನೂನು ಹೋರಾಟ ಮುಂದುವರೆಸಿದ್ದರು. ಇದರ ಪರಿಣಾಮ ನ್ಯಾಯಾಲಯದ ಸಿಬ್ಬಂದಿಯೇ ಹಾವೇರಿಗೆ ತೆರಳಿ ಘಟಕದ ವ್ಯವಸ್ಥಾಪಕರೊಂದಿಗೆ ಮಾತನಾಡಿದ್ದರು. ಸಾವನಪ್ಪಿದವರ ವಾರಸುದಾರರಿಗೆ ನ್ಯಾಯ ಕೊಡುವ ಬಗ್ಗೆ ತಿಳಿಸಿದರೂ ಅಲ್ಲಿನ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಹೀಗಾಗಿ ದತ್ತಾತ್ರೇಯ ಭಟ್ಟ ಅವರ ಹೋರಾಟ ನೆನೆದು ನ್ಯಾಯಾಲಯ ಸಿಬ್ಬಂದಿ ಹಾವೇರಿಯಿಂದ ಇಡಗುಂಜಿಗೆ ಸಂಚರಿಸುವ ಬಸ್ಸನ್ನು ವಶಕ್ಕೆ ಪಡೆದರು.




