ಕುಮಟಾ: ಟಾಟಾ ಫೈನಾನ್ಸಿನಲ್ಲಿ ಸಾಲ ಮಾಡಿ ಟಾಟಾ ನ್ಯಾನ್ಯೋ ಕಾರು ಖರೀದಿಸಿದ ಗಣೇಶ ಭಟ್ಟ ಕಾರಿನಲ್ಲಿ ದೋಷ ಕಾಣಿಸಿಕೊಂಡ ನಂತರ ಅದನ್ನು ಕಂಪನಿಗೆ ಮರಳಿಸಿದ್ದು, ಆ ಕಾರನ್ನು ಕಂಪನಿ ಬೇರೆಯವರಿಗೆ ಮಾರಾಟ ಮಾಡಿದೆ. ಕಾರು ಪಡೆದ ವ್ಯಕ್ತಿ ಮಾಲಕತ್ವ ಬದಲಾವಣೆ ಮಾಡಿಕೊಳ್ಳದ ಕಾರಣ ಸಂಚಾರಿ ನಿಯಮ ಉಲ್ಲಂಘಿಸಿದ ನೋಟಿಸ್ ಗಣೇಶ ಭಟ್ಟರಿಗೆ ಬರುತ್ತಿದೆ!
ಹಂದಿಗೋಣದ ಭಟ್ರಕೇರಿಯ ಅರ್ಚಕ ಗಣೇಶ ರಾಮಚಂದ್ರ ಭಟ್ಟ ಅವರು ಹುಬ್ಬಳ್ಳಿಯ ಟಾಟಾ ಫೈನಾನ್ಸಿನಲ್ಲಿ ಸಾಲ ಮಾಡಿ ಟಾಟಾ ನ್ಯಾನ್ಯೋ ಕಾರು ಖರೀದಿಸಿದ್ದರು. ಪದೇ ಪದೇ ಆ ಕಾರು ರಿಪೇರಿಗೆ ಬಂದಿದ್ದರಿ0ದ 2011ರಲ್ಲಿಯೇ ಟಾಟಾ ಫೈನಾನ್ಸಿನವರಿಗೆ ಅದನ್ನು ಹಿಂತಿರುಗಿಸಿದ್ದರು. ಈ ವೇಳೆ ಸಾಲದ ಮೊತ್ತವನ್ನು ಬಡ್ಡಿಸಹಿತ ಮರಳಿ ಪಾವತಿಸಿದ್ದರು.
ಅದಾದ ನಂತರ ಟಾಟಾ ಫೈನಾನ್ಸಿನವರು ಆ ಕಾರನ್ನು ಬೆಂಗಳೂರಿನ ತೌಷಿಪ್ ಎಂಬಾತರಿಗೆ ಮಾರಾಟ ಮಾಡಿದ್ದಾರೆ. ಕಾರಿನ ನೋಂದಣಿ ಸಂಖ್ಯೆ ಹಳೆಯದೇ ಇದ್ದು, ಕಾರು ಪಡೆದವ ಮಾಲಕತ್ವದ ಹಕ್ಕು ಬದಲಾವಣೆ ಮಾಡಿಕೊಂಡಿಲ್ಲ. ಆತ ಬೆಂಗಳೂರಿನಲ್ಲಿ ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸುತ್ತಿದ್ದು, ಇದರ ನೋಟಿಸ್ ಗಣೇಶ ಭಟ್ಟರಿಗೆ ಬರುತ್ತಿದೆ. `ತಾನು ಕಾರು ವರ್ಗಾವಣೆಗೆ ಬೇಕಾದ ಎಲ್ಲಾ ದಾಖಲೆ ನೀಡಿದ್ದರೂ ಟಾಟಾ ಫೈನಾನ್ಸಿನವರು ಕಾರು ವರ್ಗಾಯಿಸದೇ ಆತನಿಗೆ ನೀಡಿದ್ದಾರೆ. ಇದರಿಂದ ತನಗೆ ಸಮಸ್ಯೆಯಾಗಿದೆ’ ಎಂದು ಗಣೇಶ ಭಟ್ಟರು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಆದೇಶಿಸಿದೆ.




