ಕಾರವಾರ: `ನ್ಯಾಯಾಧೀಶರ ಆದೇಶಕ್ಕೆ ತಲೆಬಾಗುವೆ’ ಎಂದು ಹೇಳಿ ಕೋರ್ಟಿಗೆ ಹೋದ ಶಾಸಕ ಸತೀಶ್ ಸೈಲ್ ನ್ಯಾಯಾಧೀಶರ ಮುಂದೆ `ನಂದೇನು ತಪ್ಪಿಲ್ಲ.. ನಾನೇನು ಮಾಡಿಲ್ಲ’ ಎನ್ನುತ್ತ ಕಣ್ಣೀರು ಹಾಕಿದ್ದಾರೆ.
ಅಕ್ರಮವಾಗಿ ಅದಿರು ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬoಧಿಸಿ ಸಿಬಿಐ ನಡೆಸಿದ್ದ ತನಿಖೆಯಲ್ಲಿ ಶಾಸಕ ಸತೀಶ್ ಸೈಲ್ ಆರೋಪಿಯಾಗಿದ್ದರು. ಹಿಂದಿನ ಅವಧಿಯಲ್ಲಿ ಶಾಸಕರಾದಾಗಲೇ ಅವರು ಜೈಲು ಸೇರಿದ್ದರು. ಪ್ರಸ್ತುತ ಗುರುವಾರ ನ್ಯಾಯಾಲಯ ಸತೀಶ್ ಸೈಲ್ ತಪ್ಪು ಮಾಡಿರುವುದನ್ನು ದೃಢಪಡಿಸಿದೆ. ಈ ಹಿನ್ನಲೆ ಸತೀಶ್ ಸೈಲ್’ರನ್ನು ವಶ ಪಡೆಯಲು ಸೂಚಿಸಿದ್ದು, ಅಧಿಕಾರಿಗಳು ಗುರುವಾರ ಸಂಜೆ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಒಟ್ಟು ಆರು ಪ್ರಕರಣಗಳಲ್ಲಿ ಸತೀಶ್ ಸೈಲ್ ದೋಷಿಯಾಗಿದ್ದಾರೆ. 3100 ಮೆಟ್ರಿಕ್ ಟನ್ ಅದಿರನ್ನು ಸತೀಶ್ ಸೈಲ್ ಕಳ್ಳ ಸಾಗಾಣಿಕೆ ಮಾಡಿದ್ದರಿಂದ ಅವರಿಗೆ ಗರಿಷ್ಟ ಪ್ರಮಾಣದ ದಂಡದ ಜೊತೆ ಶಿಕ್ಷೆ ವಿಧಿಸಬೇಕು ಎಂದು ನ್ಯಾಯವಾದಿ ಹೇಮಾ ವಾದಿಸಿದ್ದಾರೆ. ಈ ವೇಳೆ ಸೈಲ್ ಪರ ವಕೀಲ ಮೂರ್ತಿ ನಾಯ್ಕ `ಸತೀಶ್ ಸೈಲ್ ತಪ್ಪು ಮಾಡಿಲ್ಲ’ ಎಂದು ವಾದಿಸಿದರು. `ಈ ಅಕ್ರಮ ಕಂಪನಿ ಮೂಲಕ ನಡೆದಿದೆ. ಸತೀಶ್ ಸೈಲ್ ಕಂಪನಿ ಒಡೆಯರಾಗಿದ್ದರೂ ಅವರ ಪಾತ್ರದ ಬಗ್ಗೆ ಸಿಬಿಐ ವರದಿ ನೀಡಿಲ್ಲ. ಹೀಗಾಗಿ ಕನಿಷ್ಠ ಪ್ರಮಾಣದ ಶಿಕ್ಷೆಯನ್ನು ಮಾತ್ರ ವಿತರಿಸಬೇಕು’ ಎಂದು ಮನವಿ ಮಾಡಿದರು.
ಇದಲ್ಲದೇ `ಸತೀಶ್ ಸೈಲ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದೇ ಕಾರಣದಿಂದ ಅವರು ಈ ಹಿಂದೆ ಜಾಮೀನು ಪಡೆದಿದ್ದರು’ ಎಂದು ವಿವರಿಸಿದರು. ವಿಚಾರಣೆ ವೇಳೆ ನ್ಯಾಯಾಧೀಶರು `ನೀವೇನಾದರೂ ಹೇಳುವುದಿದೆಯಾ?’ ಎಂದು ಸತೀಶ್ ಸೈಲರನ್ನು ಪ್ರಶ್ನಿಸಿದರು. ಆಗ `ನಂದೇನು ತಪ್ಪಿಲ್ಲ.. ನಾನೇನು ಮಾಡಿಲ್ಲ’ ಎನ್ನುತ್ತ ಸತೀಶ್ ಸೈಲ್ ಕಣ್ಣೀರು ಸುರಿಸಿದರು.
ಅನುಕಂಪದ ಅಲೆ!
`ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಬ್ಬಳು ಬೆಂಗಳೂರು, ಇನ್ನೊಬ್ಬಳು ವಿಜಯನಗರದಲ್ಲಿದ್ದು, ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ’ ಎಂದು ಸತೀಶ್ ಸೈಲ್ ಹೇಳಿದರು. `ನಾನು ಸಹ ಕ್ರೋನಿಕಲ್ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಹೀಗಾಗಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿ’ ಎಂದು ಕಣ್ಣೀರು ಸುರಿಸಿದರು. `ಸೈಲ್ ಅವರನ್ನು ಕಸ್ಟಡಿಗೆ ಪಡೆಯಬಾರದು’ ಎಂದು ಅವರ ಪರ ವಕೀಲರು ಮನವಿ ಮಾಡಿದರು. ಆದರೆ, `ಇದಕ್ಕೆ ಅವಕಾಶ ಇಲ್ಲ’ ಎಂದು ನ್ಯಾಯಾಧೀಶರು ಸ್ಪಷ್ಠಪಡಿಸಿದರು.
ಈ ವೇಳೆ ಇನ್ನಿತರ ಅಪರಾಧಿಗಳು ಸಹ `ನಮ್ಮ ಇಡೀ ಕುಟುಂಬ ನಮ್ಮಿಂದಲೇ ನಡೆಯುತ್ತಿದೆ. ಹೀಗಾಗಿ ಶಿಕ್ಷೆ ಪ್ರಮಾಣ ಕಡಿಮೆ ಮಾಡಿ’ ಎಂದು ಮನವಿ ಮಾಡಿದರು. ಶನಿವಾರ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.





