ಯಲ್ಲಾಪುರ: ಜಿಲ್ಲಾ ಮಟ್ಟದ ರೂರಲ್ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿದ ಬಿಸಗೊಡು ಶಾಲೆ ವಿದ್ಯಾರ್ಥಿಗಳಿಬ್ಬರು ಅಲ್ಲಿ ಬಹುಮಾನ ಗೆದ್ದು ಧಾರವಾಡ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಶಶಾಂಕ್ ಗೋಪಾಲಕೃಷ್ಣ ಭಟ್ ಮತ್ತು ಆದಿತ್ಯ ಮಂಜುನಾಥ ಅರೆಗುಳಿ ಸಾಧಕ ವಿದ್ಯಾರ್ಥಿಗಳು. ನವೆಂಬರ್’ನಲ್ಲಿ ವಿಭಾಗ ಮಟ್ಟದ ಸ್ಪರ್ಧೆ ನಡೆಯಲಿದೆ. ಅದಕ್ಕಾಗಿ ಈ ಇಬ್ಬರು ತಯಾರಿ ನಡೆಸಿದ್ದಾರೆ. ಕಿಚ್ಚುಪಾಲಿನವರಾದ ಶಶಾಂಕ ಭಟ್ಟ ಈಚೆಗೆ ಹೆಸ್ಕಾಂ ಗುತ್ತಿಗೆದಾರರು ನಡೆಸಿದ ಚೆಸ್ ಸ್ಪರ್ಧೆಯಲ್ಲಿ ಸಹ ಬಹುಮಾನ ಪಡೆದಿದ್ದರು. ನಿತ್ಯ 5ಕಿಮೀ ನಡೆದು ಅವರು ಬಿಸಗೋಡು ಶಾಲೆಗೆ ಬರುತ್ತಾರೆ. ಓದಿನಲ್ಲಿ ಸಹ ಮುಂದಿದ್ದಾರೆ.
ಇನ್ನೂ ದೆಹಳ್ಳಿ ಅರೆಗುಳಿಯ ಆದಿತ್ಯ ಮಂಜುನಾಥ ಅರೆಗುಳಿ ಸಮಯದ ಸದುಪಯೋಗ ಪಡಿಸಿಕೊಳ್ಳುವಲ್ಲಿ ಎತ್ತಿದ ಕೈ. ಈ ಕಾರಣದಿಂದಲೇ ಅವರು ಕ್ವಿಜ್ ಸೇರಿ ಹಲವು ಸ್ಪರ್ಧೆಗಳಲ್ಲಿ ಗೆಲುವು ಕಂಡಿದ್ದಾರೆ. 10ನೇ ತರಗತಿಯಲ್ಲಿ ಓದುತ್ತಿರುವ ಈ ಇಬ್ಬರೂ ವಿದ್ಯಾರ್ಥಿಗಳು ಕಳೆದ ವರ್ಷ ಆರ್ಬಿಐ ನಡೆಸಿದ ರಾಜ್ಯಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಹ ಭಾಗವಹಿಸಿದ್ದರು.




