ಕುಮಟಾ: ಹೆಗಡೆಯ ಶಾಂತಿಕಾ ಪರಮೇಶ್ವರಿ ದೇವಾಲಯದ ರಥಬೀದಿಯಲ್ಲಿ ಮಲಗಿದ್ದ ಜಾನುವಾರುಗಳನ್ನು ಕದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಇಬ್ಬರ ಶೋಧ ಮುಂದುವರೆದಿದೆ.
ಅಕ್ಟೊಬರ್ 9ರ ರಾತ್ರಿ ರಸ್ತೆ ಅಂಚಿನಲ್ಲಿ ಮಲಗಿದ್ದ ಎರಡು ಎತ್ತುಗಳನ್ನು ಮೂವರು ಅಪಹರಿಸಿದ್ದರು. ತಮ್ಮ ಕಾರಿನಲ್ಲಿ ಎತ್ತುಗಳನ್ನು ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಅಲ್ಲಿನ ಪವನಕುಮಾರ ವಿನೋದ ಪ್ರಭು ಪೊಲೀಸ್ ದೂರು ನೀಡಿದ್ದರು. ಪ್ರಕರಣದ ಬೆನ್ನತ್ತಿ ಹೋದ ಪಿಎಸ್ಐ ಸಾವಿತ್ರಿ ನಾಯಕ ಅಕ್ಟೊಬರ್ 25ರ ನಸುಕಿನಲ್ಲಿ ಒಬ್ಬ ಕಳ್ಳನನ್ನು ಹಿಡಿದಿದ್ದಾರೆ.
ಮುರುಡೇಶ್ವರದ ನೂರಲ್ ಹಸನ್ ಅಬು ಮಹಮ್ಮದರ್ ಗೈಮಾ ಎಂಬಾತ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ದನ ಕಳ್ಳತನ ಮಾಡಿದ ಈತನಿಗೆ ನ್ಯಾಯಾಲಯ ನವೆಂಬರ್ 6ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತ ಈತ ಇನ್ನೂ ಇಬ್ಬರ ಹೆಸರು ಬಾಯ್ಬಿಟ್ಟಿದ್ದು ಅವರು ತಲೆಮರೆಸಿಕೊಂಡಿದ್ದಾರೆ. ಸಿಪಿಐ ಯೋಗೇಶ ಕೆ ಎಂ, ಪಿಎಸ್ಐ ಮಂಜುನಾಥ ಗೌಡರ್, ರವಿ ಗುಡ್ಡಿ, ಮಯೂರ ಪಟ್ಟಣಶೆಟ್ಟಿ ತಪ್ಪಿಸಿಕೊಂಡವರ ಹುಡುಕಾಟ ನಡೆಸಿದ್ದಾರೆ. ದನ ಕಳ್ಳತನಕ್ಕೆ ಬಳಸಿದ್ದ ಸ್ಕಾರ್ಫಿಯೋ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ಸಿಬ್ಬಂದಿ ದಯಾನಂದ ನಾಯ್ಕ, ಗಣೇಶ ನಾಯ್ಕ, ಗುರು ನಾಯಕ, ಆಂಜಿನೇಯ, ರಘುವೀರ, ಮಾರುತಿ, ಮಹಮದ್ ಗೌಸ್ ದನಗಳ್ಳರನ್ನು ಪತ್ತೆ ಮಾಡುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ.




