ಶಿರಸಿ: ಸೂಕ್ತ ಸಾಕ್ಷಿ ಸಿಗದೇ ದಾವಣಗೆರೆ ನ್ಯಾಯಾಲಯ ವಿಧಿಸಬಹುದಾದ ಶಿಕ್ಷೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಇಬ್ಬರು ಡಕಾಯಿತರಿಗೆ ಶಿರಸಿ ನ್ಯಾಯಾಲಯ ಯೋಗ್ಯ ಶಿಕ್ಷೆ ವಿಧಿಸಿದೆ.
ಮಾರಣಾಂತಿಕ ಹಲ್ಲೆ, ಮನೆ ದರೊಡೆ ಮಾಡುವುದನ್ನು ಉದ್ಯೋಗವನ್ನಾಗಿಸಿಕೊಂಡಿದ್ದ ಬಹೂದ್ದೂರ್ ಸಿಂಗ್ ಹಾಗೂ ಸೂರಬ್ ಎಂಬಾತರಿಗೆ ಶಿರಸಿ ನ್ಯಾಯಾಧೀಶ ಕಿರಣ ಕಿಣಿ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದಾರೆ. ಮದ್ಯಪ್ರದೇಶದ ಈ ಇಬ್ಬರು ಕರ್ನಾಟಕಕ್ಕೆ ಆಗಮಿಸಿ ಅನೇಕರ ಮೇಲೆ ಹಲ್ಲೆ ನಡೆಸಿದ್ದರು. ಒಂಟಿ ಮನೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದ್ದ ಅವರು ಮನೆಯಲ್ಲಿದ್ದವರನ್ನು ಥಳಿಸಿ ಚಿನ್ನ, ಬೆಳ್ಳಿ, ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದರು.
ದಾವಣಗೆರೆಯಲ್ಲಿ ನಡೆದ ಪ್ರಕರಣವೊಂದರಲ್ಲಿ ಅವರು ಆರೋಪಿಗಳಾಗಿದ್ದು, ಆ ಪ್ರಕರಣದಿಂದ ಖುಲಾಸೆಯಾಗಿದ್ದರು. ಆದರೆ, ಶಿರಸಿಯಲ್ಲಿ ನಡೆದ ಪ್ರಕರಣಕ್ಕೆ ಸಂಬAಧಿಸಿ ಆರೋಪವಿದ್ದರೂ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ತಲೆಮರೆಸಿಕೊಂಡಿದ್ದ ಈ ಇಬ್ಬರನ್ನು ಪಿಎಸ್ಸೈ ರತ್ನಾ ಕುರಿ ಅವರ ಊರಿಗೆ ತೆರಳಿ ಬಂಧಿಸಿದ್ದರು. 2017ರಲ್ಲಿ ಭಾಗಿರಥಿ ಬಾಳೆಮನೆ ಎಂಬಾತರ ಮನೆಗೆ ನುಗ್ಗಿ ಅವರಿಗೆ ಹಾಗೂ ಅವರ ಮಗಳು ಶಾಂತಲಾ ಎಂಬಾತರಿಗೆ ಹಲ್ಲೆ ನಡೆಸಿದ ಆರೋಪ ಡಕಾಯಿತರ ಮೇಲಿತ್ತು.
ಆ ವೇಳೆ ಭಾಗಿರಥಿ ಅವರ ಮನೆಯಲ್ಲಿದ್ದ ಒಡವೆಗಳನ್ನು ಅವರು ಅಪಹರಿಸಿದ್ದರು. ಹಣ ಹಾಗೂ ಮೊಬೈಲ್ ಸಹ ದೋಚಿ ಪರಾರಿಯಾಗಿದ್ದರು. ಶಿರಸಿಯ ವಿದ್ಯಾನಗರ ಮತ್ತು ಸಹ್ಯಾದ್ರಿ ಕಾಲೋನಿಯಲ್ಲಿ ನಡೆದ ಮನೆ ದರೋಡೆ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಎಲ್ಲಾ ಸಾಕ್ಷಿ ಹಾಗೂ ದಾಖಲೆ ಪರಿಶೀಲಿಸಿ ಆದೇಶ ಹೊರಡಿಸಿದೆ. ಅದರ ಪ್ರಕಾರ ಬಹೂದ್ದೂರ್ ಸಿಂಗ್ ಹಾಗೂ ಸೂರಬ್’ಗೆ ಜೀವಾವಧಿ ಶಿಕ್ಷೆ ಜೊತೆ 10 ಸಾವಿರ ರೂ ದಂಡ ವಿಧಿಸಿದೆ. ಸರಕಾರಿ ಅಭಿಯೋಜಕರಾದ ರಾಜೇಶ ಎಂ ಮಳಗಿಕರ ಅವರು ಸಂತ್ರಸ್ತರ ಪರ ವಾದ ಮಂಡಿಸಿದ್ದರು.




