ಯಲ್ಲಾಪುರ: ರಾಜ್ಯದಲ್ಲಿ ವಕ್ಟ್ ವಿವಾದ ಬುಗಿಲೆದ್ದ ಬೆನ್ನಲ್ಲೆ ಹುತ್ಕಂಡದ ಸೊಪ್ಪಿನ ಬೆಟ್ಟಕ್ಕೆ ಸಂಬ0ಧಿಸಿ ಅನ್ಯರ ಹೆಸರು ದಾಖಲಾಗಿರುವುದು ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಊರಿನ ವಾಟ್ಸಪ್ ಗುಂಪಿನಲ್ಲಿ ಭಾರೀ ಪ್ರಮಾಣದ ಚರ್ಚೆ ನಡೆದಿದ್ದು, ಗ್ರಾಮೀಣ ಭಾಗದ ಸೊಪ್ಪಿನ ಬೆಟ್ಟದ ಮೇಲೆಯೂ ಕಿಡಿಗೇಡಿಗಳ ಕಣ್ಣು ಬಿದ್ದಿದ್ದರಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಗೋಳಿಗದ್ದೆ ಶಾಲೆಯ ಬಳಿ ರಾಮಚಂದ್ರ ಭಾಗ್ವತ ಅವರು ಸೊಪ್ಪಿನ ಬೆಟ್ಟವನ್ನು ಹೊಂದಿದ್ದಾರೆ. ಕೆಲ ವರ್ಷಗಳಿಂದ ಅವರಿಗೆ ಸೊಪ್ಪಿನ ಬೆಟ್ಟ ಬಳಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಆ ಭಾಗದಲ್ಲಿ ದಟ್ಟ ಕಾಡಿನ ಹಾಗೇ ಗಿಡ-ಗಂಟಿಗಳು ಬೆಳೆದಿವೆ. ಈಚೆಗೆ ವ್ಯಕ್ತಿಯೊಬ್ಬರು ಗೂಗಲ್ ಮ್ಯಾಪಿನಲ್ಲಿ ಊರಿನ ಚಿತ್ರಣ ನೋಡುತ್ತಿದ್ದಾಗ ಭಾಗ್ವತರ ಸೊಪ್ಪಿನ ಬೆಟ್ಟದ ಹೆಸರು ಬದಲಾಗಿರುವುದು ಗಮನಕ್ಕೆ ಬಂದಿದೆ. ಅದನ್ನು ಅವರು ಊರಿನ ಜನರಿರುವ ಸಾಮಾಜಿಕ ಗುಂಪುಗಳಲ್ಲಿ ಹಂಚಿಕೊoಡಿದ್ದಾರೆ.
ರಾಮಚoದ್ರ ಭಾಗ್ವತ ಅವರ ಹಕ್ಕಿನ ಸೊಪ್ಪಿನ ಬೆಟ್ಟಕ್ಕೆ `ಕರೀಂ ಮಂಜಿಲ್’ ಎಂದು ಗೂಗಲ್ ಮ್ಯಾಪ್ ಹೆಸರು ದಾಖಲಿಸಿದೆ. ಆ ಭಾಗದಲ್ಲಿ ಎಲ್ಲಿಯೂ `ಕರಿಂ ಮಂಜಿಲ್’ ಎಂಬ ವ್ಯಕ್ತಿಯಿಲ್ಲ. ಅದಾಗಿಯೂ ಅಂಥ ಹೆಸರು ದಾಖಲಾದ ಬಗ್ಗೆ ಊರಿನವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗ್ರಾಮದ ವಾಟ್ಸಪ್ ಗ್ರೂಪ್’ನಲ್ಲಿ ಎರಡು ವಾರದ ಹಿಂದೆ ಭಾರೀ ಪ್ರಮಾಣದ ಚರ್ಚೆ ನಡೆದಿದ್ದು, ಗ್ರಾಮಸ್ಥರು ಒಗ್ಗಟ್ಟಿನಿಂದ ಪ್ರತಿಭಟಿಸುವ ಮಾತುಕತೆಯನ್ನು ನಡೆಸಿದ್ದಾರೆ.
ಈ ವಿಷಯ ಅರಿವಿಗೆ ಬಂದ ನಂತರ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅದು ಭಾಗ್ವತ ಅವರ ಹಕ್ಕಿಗೆ ಒಳಪಡುವ ಸೊಪ್ಪಿನ ಬೆಟ್ಟ ಎಂದು ಖಚಿತಪಡಿಸಿದ್ದಾರೆ. ಒಂದು ವಾರದ ನಂತರ ಸೊಪ್ಪಿನ ಬೆಟ್ಟದಲ್ಲಿ ಅವಿತಿದ್ದ `ಕರಿಂ ಮಂಜಿಲ್’ ಕಾಣೆಯಾಗಿದ್ದು, ಪ್ರಸ್ತುತ ಗೂಗಲ್ ಮ್ಯಾಪಿನಲ್ಲಿ ಯಾವ ಹೆಸರು ಕಾಣುತ್ತಿಲ್ಲ.
ಗೂಗಲ್ ನಕ್ಷೆಯಲ್ಲಿ ಮಾತ್ರ ಈ ಅವಾಂತರ ಕಂಡು ಬಂದಿದ್ದು, ಸರ್ಕಾರಿ ದಾಖಲೆಯಾದ ಪಹಣಿಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.




