ಭಟ್ಕಳ: ಮುರುಡೇಶ್ವರದ ಬಳಿ ಮಟ್ಕಾ ಆಡಿಸುತ್ತಿದ್ದ ಸಂಜಯ್ಯ ಬಾಕಡ ಎಂಬಾತನ ಮೇಲೆ ದಾಳಿ ನಡೆಸಿದ ಪೊಲೀಸರು ಆತ ಜನರಿಂದ ಸಂಗ್ರಹಿಸಿದ ಹಣದ ಜೊತೆ ಅಂಕಿ ಸಂಖ್ಯೆ ಬರೆಯುತ್ತಿದ್ದ ಬಾಲ್ಪೆನ್’ನ್ನು ವಶಕ್ಕೆ ಪಡೆದಿದ್ದಾರೆ.
ಚಿತ್ರಾಪುರ ಬಪ್ಪನಕೊಡ್ಲುವಿನ ಸಂಜಯ್ಯ ಕುಪ್ಪಯ್ಯ ಬಾಕಡ (23) ಕೂಲಿ ಕೆಲಸ ಮಾಡುತ್ತಿದ್ದ. ನ 5 ಸಂಜೆ ಆತ ಮಾವಿನಕಟ್ಟಾ ಕ್ರಾಸಿನಿಂದ ಮುರುಡೇಶ್ವರಕ್ಕೆ ಹೋಗುವ ರಸ್ತೆ ಅಂಚಿನಲ್ಲಿ ನಿಂತು ಜನರಿಗೆ ಜೂಜಾಟದ ಆಮೀಷ ಒಡ್ಡಿದ್ದ. 1 ರೂಪಾಯಿ ಹೂಡಿಕೆ ಮಾಡಿದರೆ 70ರೂ ನೀಡುವುದಾಗಿ ಆತ ಹೇಳಿಕೊಂಡಿದ್ದ. ಇದನ್ನು ನಂಬಿದ ಜನ ಆತನಿಗೆ ಹಣ ಕೊಟ್ಟು ಹೋಗುತ್ತಿದ್ದರು.
ಜನರಿಂದ ಅಂಕಿ-ಸ0ಖ್ಯೆಗಳ ಮೇಲೆ ಹಣ ಹೂಡಿಕೆ ಮಾಡಿಕೊಳ್ಳುತ್ತಿದ್ದ ಸಂಜಯ ಬಿಳಿ ಹಾಳೆ ಮೇಲೆ ಸಂಖ್ಯೆಗಳನ್ನು ಬರೆದುಕೊಂಡಿದ್ದ. ಹೀಗೆ 4630ರೂ ಹಣವನ್ನು ಆತ ಸಂಗ್ರಹಿಸಿದ್ದ. ಮುರುಡೇಶ್ವರ ಪಿಎಸ್ಐ ಹಣಮಂತ ಬೀರಾದರ್ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಮಟ್ಕಾ ಆಡಿಸುತ್ತಿರುವುದನ್ನು ಒಪ್ಪಿಕೊಂಡಿದ್ದ. ಜೊತೆಗೆ ಸಂಖ್ಯೆಗಳ ಚೀಟಿ, ಬಾಲ್ಪೆನ್ ಜೊತೆ ಇದ್ದ ಹಣ ಆತನ ಮಟ್ಕಾ ಆಟಕ್ಕೆ ಸಾಕ್ಷಿಯಾಗಿದ್ದು, ಅದೆಲ್ಲವನ್ನು ಪೊಲೀಸರು ವಶಕ್ಕೆ ಪಡೆದರು.




