ಯಲ್ಲಾಪುರ: ಕಳೆದ 25 ವರ್ಷಗಳಿಂದ ಭರತನಾಟ್ಯ ಸೇವೆಯಲ್ಲಿರುವ ವಿನುತಾ ಹೆಗಡೆ ಅವರು ಶನಿವಾರ ಸಂಜೆ ವೇದವ್ಯಾಸ ಸಭಾ ಮಂಟಪದಲ್ಲಿ ಮೂರುವರೆ ಗಂಟೆಗಳ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನೀಡಿದರು.
ಕೊಳಲು, ರಿದಂ ಪ್ಯಾಡ್, ನಾಟುರಂಗ, ಮೃದಂಗಗಳಿಂದ ಕೂಡಿದ ವೇದಿಕೆಯಲ್ಲಿ ಸತ್ಸಂಗದ ಗಾಯನಕ್ಕೆ ನೆರೆದಿದ್ದ ಜನ ಕಿವಿಯಾದರು. ಬಗೆ ಬಗೆಯ ದೀಪಾಲಂಕಾರ ಬೆಳಕಿನಲ್ಲಿ ನಡೆದ ನೃತ್ಯವನ್ನು ಕಣ್ತುಂಬಿಕೊಂಡರು. ‘ರಂಗ ರಜತಂ’ ಹೆಸರಿನಡಿ ಭರತನಾಟ್ಯ ಪ್ರದರ್ಶನ ನಡೆದಿದ್ದು ವಿನುತಾ ರಾಘವೇಂದ್ರ ಹೆಗಡೆ ಅವರೊಂದಿಗೆ ಕೆಲಕಾಲ ಅವರ ಪುತ್ರಿ ವಾರುಣಿ ಹೆಗಡೆ ಸಹ ಹೆಜ್ಜೆ ಹಾಕಿದರು. ಸಾವಿರಾರು ಜನರ ಸಮ್ಮುಖದಲ್ಲಿ ಅವರು ಗಾಯನಕ್ಕೆ ತಕ್ಕಂತೆ ನೃತ್ಯ ಮಾಡಿದರು.
ಅತ್ಯದ್ಭುತ ಧ್ವನಿ-ಬೆಳಕಿನ ಸಂಯೋಜನೆಯಲ್ಲಿ ಮೂಡಿ ಬಂದ ಸಾಹಿತ್ಯ-ಸಂಗೀತ-ನೃತ್ಯ ಕಾರ್ಯಕ್ರಮವನ್ನು ಜನ ಆಹ್ವಾದಿಸಿದರು. ಭಸ್ಮಾಸ್ಮುರ ಮೋಹಿನಿ, ಸ್ವಾಮಿ ಶರಣಂ ಅಯ್ಯಪ್ಪ ನೃತ್ಯ ರೂಪಕಗಳು ಗಮನ ಸೆಳೆದವು.
ನಾಟ್ಯಾಂಜಲಿ ಕಲಾ ಕೇಂದ್ರದದ ಮೂಲಕ ಮಕ್ಕಳಿಗೆ ನೃತ್ಯ ಪಾಠ ಮಾಡುತ್ತಿರುವ ವಿನುತಾ ಹೆಗಡೆ ಅವರು ಈವರೆಗೆ ನೂರಾರು ಪ್ರದರ್ಶನ ನೀಡಿದ್ದಾರೆ. ನಾಡಿನ ನಾನಾ ವೇದಿಕೆಗಳಲ್ಲಿ ಅವರು ತಮ್ಮ ಪ್ರತಿಭೆ ಪ್ರದರ್ಶಿಸಿದ್ದು ಹಲವು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ರಂಗ ಪ್ರವೇಶಿಸಿ 25 ವಸಂತ ಪೂರೈಸಿದ ಹಿನ್ನಲೆ ನಾಡಿನ ಖ್ಯಾತ ಕಲಾವಿದರನ್ನು ಕರೆಯಿಸಿ ಅವರ ಸಾಕ್ಷಿಯಾಗಿ ಶನಿವಾರ ತಮ್ಮ ಪ್ರದರ್ಶನ ನೀಡಿದ್ದಾರೆ.




