ಕುಮಟಾ: ಮೂರೂರಿನ ಕುಡವಳ್ಳಿಯಲ್ಲಿ ಜೆಜೆಎಂ ಕಾಮಗಾರಿ ನಡೆಸುತ್ತಿದ್ದ ಜೆಸಿಬಿ ಚಾಲಕನ ಮೇಲೆ ಕಾಡು ಹಂದಿ ದಾಳಿ ನಡೆಸಿದೆ. ಆತನ ಕೂಗಿಗೆ ಬೆಚ್ಚಿಬಿದ್ದ ಹಂದಿ ತಪ್ಪಿಸಿಕೊಳ್ಳುವ ದಾವಂತದಲ್ಲಿ ಬಾವಿಗೆ ಬಿದ್ದಿದೆ. ಗಾಯಾಳುವನ್ನು ಊರಿನವರು ಆಸ್ಪತ್ರೆಗೆ ಸಾಗಿಸಿ ರಕ್ಷಿಸಿದ್ದು, ಹಂದಿಯನ್ನು ಅರಣ್ಯಾಧಿಕಾರಿಗಳು ಮೇಲೆತ್ತಿ ಬದುಕಿಸಿದ್ದಾರೆ!
ಮೂರೂರು ಗ್ರಾ ಪಂ ವ್ಯಾಪ್ತಿಯ ಬೊಗ್ರಿಬೈಲ್ ಕುಡವಳ್ಳಿಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಕೆಲಸ ನಡೆಯುತ್ತಿದೆ. ಕುಡಿಯುವ ನೀರಿನ ಕಾಮಗಾರಿಗಾಗಿ ಓರಿಸ್ಸಾದ ಮನು ಎಂಬಾತರು ಜೆಸಿಬಿ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ಸಂಜೆ ಕೆಲಸ ಮುಗಿಸಿ ಯಂತ್ರದಿAದ ಕೆಳಗೆ ಇಳಿದ ಅವರನ್ನು ಕಾಡು ಹಂದಿ ಅಟ್ಟಿಸಿಕೊಂಡು ಬಂದು ತಿವಿದಿದೆ. ಗಂಭೀರ ಗಾಯಗೊಂಡ ಮನು ಅವರನ್ನು ಸ್ಥಳೀಯರು ತಾಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿನ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಮಣಿಪಾಲ್ಗೆ ಕರೆದೊಯ್ಯಲು ಸೂಚಿಸಿದರು. ಅದರ ಪ್ರಕಾರ ಮನು ಅವರಿಗೆ ಮಣಿಪಾಲಿನಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇನ್ನೂ ಹಂದಿ ದಾಳಿಗೆ ಒಳಗಾದ ಮನು ಜೋರಾಗಿ ಬೊಬ್ಬೆ ಹೊಡೆದಿದ್ದು, ಬೊಬ್ಬೆ ಸದ್ದಿಗೆ ಹಂದಿಯೂ ಕಂಗಾಲಾಗಿದೆ. ಜನ ಜಮಾಯಿಸಿದ್ದರಿಂದ ಬೆದರಿದ ಹಂದಿ ಕಾಡಿನ ಬಳಿ ಓಡಿದ್ದು, ನಡುವೆ ಮನೆ ಪಕ್ಕ ಇದ್ದ ಬಾವಿಗೆ ಬಿದ್ದಿದೆ. ಅರಣ್ಯ ಸಿಬ್ಬಂದಿ ಆಗಮಿಸಿ ಹಂದಿಯನ್ನು ಮೇಲೆತ್ತಿ ಕಾಡಿಗೆ ಓಡಿಸಿದ್ದಾರೆ.




