ಕಾರವಾರ: ಒಂದಲ್ಲ.. ಎರಡಲ್ಲ ದೇಶದ ನಾನಾ ಭಾಗಗಳಿಗೆ ತೆರಳಿ ಒಟ್ಟು 128 ಮನೆಗಳಿಗೆ ನುಗ್ಗಿ ದರೋಡೆ ಮಾಡಿದ ಡಕಾಯಿತನನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ.
ದಿನಕ್ಕೊoದು ವೇಷ, ದಿನಕ್ಕೊಂದು ಹೆಸರು ಹಾಗೂ ಆಗಾಗ ತನ್ನ ವಿಳಾಸವನ್ನು ಬದಲಿಸಿಕೊಂಡು ದೇಶದ ನಾನಾ ಭಾಗಗಳಿಗೆ ಸಂಚರಿಸಿ ಕಳ್ಳತನ ಮಾಡುವುದನ್ನು ಸುಮೇರ್ ಶರ್ಮಾ ಕಾಯಕವನ್ನಾಗಿಸಿಕೊಂಡಿದ್ದ. ಹೊನ್ನಾವರದ ದುರ್ಗಾಕೇರಿಯಲ್ಲಿ ಮನೆ ಮಾಡಿಕೊಂಡಿದ್ದ ಈತ ಪ್ರತಿ ಬಾರಿಯೂ ಆತ ತನ್ನ ಹೆಸರನ್ನು ಸ್ಯಾಮ್, ಜ್ಯಾಕ್, ಜಾನ್ ಎಂದು ಬದಲಿಸಿಕೊಂಡು ಓಡಾಡುತ್ತಿದ್ದ. ಬೆಂಗಳೂರು ಬನಶಂಕರಿ ಮೂಲದವನಾದ ಈತ ನ 7ರಂದು ಕಾರವಾರಕ್ಕೆ ಆಗಮಿಸಿದ್ದ. ಆಶ್ರಮ ರಸ್ತೆಯಲ್ಲಿರುವ ಅಭಿಮಾನಶ್ರೀ ಅಪಾರ್ಟಮೆಂಟಿಗೆ ನುಗ್ಗಿದ ಆತ ಅಲ್ಲಿ ಶಿಕ್ಷಕಿ ಪ್ರಿಯಾ ಫರ್ನಾಂಡಿಸ್ ಅವರ ಮನೆಗೆ ಕನ್ನ ಹಾಕಿದ್ದ. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಆತ ಪರಾರಿಯಾಗಿದ್ದ ಬಗ್ಗೆ ಶಿಕ್ಷಕಿ ಪೊಲೀಸ್ ದೂರು ನೀಡಿದ್ದರು.
ಈ ಕಳ್ಳತನ ಪ್ರಕರಣದ ತನಿಖೆಗೆ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು 3 ತಂಡ ರಚಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿಟಿ ಜಯಕುಮಾರ ಹಾಗೂ ಜಗದೀಶ ಎಂ ಹಾಗೂ ಡಿವೈಎಸ್ಪಿ ಎಸ್ ವಿ ಗಿರೀಶ ಹಗಲು ವೇಳೆಯಲ್ಲಿಯೇ ನಡೆದ ಈ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಬೆರಳುಮುದ್ರೆ ಘಟಕದ ಪೊಲೀಸ್ ನಿರೀಕ್ಷಕ ರಾಘವೇಂದ್ರ ನಾಯ್ಕ ಹಾಗೂ ನಿಸ್ತಂತು ವಿಭಾಗದ ಪೊಲೀಸ್ ನಿರೀಕ್ಷಕ ಸಂತೋಷ ಜಾದವ್ ಘಟನಾ ಸ್ಥಳಕ್ಕೆ ತೆರಳಿ ಹಲವು ಕುರುಹುಗಳನ್ನು ಸಂಗ್ರಹಿಸಿದರು.
ಕಾರವಾರ ನಗರ ಪೊಲೀಸ್ ಠಾಣೆಯ ಸಿಪಿಐ ರಮೇಶ ಹೂಗಾರ್, ಪಿಎಸ್ಐ ರವೀಂದ್ರ ಬೀರಾದರ್ ಹಾಗೂ ಸಿಬ್ಬಂದಿ ಸೂರಜ್ ಕೋಠಾರಕರ್, ಹುಸನ ಕುಟ್ಟಿ, ಗಿರೀಶ ಎಂ ಎಸ್ ತಂಡದವರು ಕಳ್ಳತನದ ಆರೋಪಿ ಪಂಜಾಬ್ ರಾಜ್ಯದ ಅಮೃತಸರ ಬಳಿ ಇರುವುದನ್ನು ಪತ್ತೆ ಮಾಡಿದರು. ಗೊಲ್ಡನ್ ಟೆಂಪಲ್ ಬಳಿ ತೆರಳಿದ ಪೊಲೀಸರು ಅಲ್ಲಿದ್ದ ಸುಮೇರ್ ಶರ್ಮಾನನ್ನು ವಶಕ್ಕೆ ಪಡೆದರು.
ಸಿಕ್ಕಿಬಿದ್ದ ಕಳ್ಳನನ್ನು ವಿಚಾರಣೆ ನಡೆಸಿದಾಗ ಬೆಂಗಳೂರು, ಗೋವಾ, ಪಂಜಾಬ್, ಉತ್ತರ ಪ್ರದೇಶ ಸೇರಿ ದೇಶದ ನಾನಾ ಭಾಗಗಳಲ್ಲಿ ಈತ ಕಳ್ಳತನ ನಡೆಸಿರುವುದು ಗೊತ್ತಾಯಿತು. ಪೊಲೀಸ್ ಉಪನಿರೀಕ್ಷಕರಾದ ರವೀಂದ್ರ ಬೀರಾದರ, ವಿಶ್ವನಾಥ ನಿಂಗೊಳ್ಳಿ, ಕುಮಾರ ಕಾಂಬ್ಳೆ ಹಾಗೂ ಪೊಲೀಸ್ ಸಿಬ್ಬಂದಿ ರಾಜೇಶ ನಾಯಕ, ಮುಕ್ತಮಸಾಬ್ ಪತ್ತೆಖಾನ್, ವಿಶ್ವನಾಥ ಬಿಟಿ, ಅರ್ಜುನ ದೇಸಾಯಿ, ಉದಯ ಗುನಾಗಾ, ಪ್ರಕಾಶ ದಂಡಪ್ಪನವರ, ಚಂದ್ರಿಕಾ ಮೊಗೇರ್ ಹಾಗೂ ವೀಣಾ ಯತ್ನಳ್ಳಿ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿನ ಮಾಹಿತಿ ಸಂಗ್ರಹಿಸಿದರು. ಆಯಾ ಭಾಗದ ಪೊಲೀಸ್ ಠಾಣೆಯಲ್ಲಿ ಸಹ ಆತನ ವಿರುದ್ಧ ಸಾಕಷ್ಟು ಸಾಕ್ಷಿಗಳಿದ್ದವು.
ಇದನ್ನು ಓದಿ: ಕಳ್ಳನ ಕೈಗೆ ಮನೆ ಕೀ ಕೊಟ್ಟ ಶಿಕ್ಷಕಿ!
ಒಟ್ಟು 128 ಕಳ್ಳತನ ಪ್ರಕರಣದಲ್ಲಿ ಪೊಲೀಸರು ಆತನ ಹುಡುಕಾಟದಲ್ಲಿದ್ದರು. 71 ಪ್ರಕರಣದಲ್ಲಿ ಈತನ ಮೇಲೆ ನ್ಯಾಯಾಲಯದ ವಾರೆಂಟ್ ಜಾರಿಯಾಗಿದ್ದು, ನ್ಯಾಯಾಲಯಕ್ಕೆ ಸಹ ಹೋಗದೇ ಎಲ್ಲೆಂದರಲ್ಲಿ ತಿರುಗಾಡುತ್ತಿರುವುದನ್ನು ನೋಡಿ ಪೊಲೀಸರೇ ಅಚ್ಚರಿಗೆ ಒಳಗಾಗಿದ್ದರು. ಪ್ರಸ್ತುತ ಆತನನ್ನು ಬಂಧಿಸಿದ ಕಾರವಾರ ಪೊಲೀಸರು 34.26 ಗ್ರಾಂ ಬಂಗಾರ 3 ಲಕ್ಷ ರೂ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.




