ಸಿದ್ದಾಪುರ: ಸಹಕಾರಿ ಸಂಘದ ಅಕ್ರಮ, ಅವ್ಯವಹಾರ, ಏಕಪಕ್ಷೀಯ ನಿರ್ಧಾರ ಹಾಗೂ ಇನ್ನಿತರ ಆರೋಪಗಳ ಹಿನ್ನಲೆ ಕರ್ಕಿಮಕ್ಕಿಯ ದೊಡ್ಡನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮತ್ತು ನಿರ್ದೇಶಕರೊಬ್ಬರು ತಮ್ಮ ಹುದ್ದೆಯಿಂದ ಅನರ್ಹರಾಗಿದ್ದಾರೆ. ಸಂಘದ ಅಧ್ಯಕ್ಷರಾಗಿದ್ದ ಸುಬ್ರಾಯ ನಾರಾಯಣ ಭಟ್ಟ ಮತ್ತು ನಿರ್ದೇಶಕ ವಿವೇಕ ಸುಬ್ರಾಯ ಭಟ್ಟ ಎಂಬಾತರನ್ನು ಅನರ್ಹಗೊಳಿಸಿ ಶಿರಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯ ಆದೇಶ ಹೊರಡಿಸಿದೆ.
ದೊಡ್ಡನೆ ಸೊಸೈಟಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಕುಡಗೋಡ ಪ್ರಕಾಶ ರಾಮಚಂದ್ರ ಹೆಗಡೆ ದೂರು ನೀಡಿದ್ದರು. ಇದಕ್ಕಾಗಿ ಎರಡು ಪ್ರತ್ಯೇಕ ಪ್ರಕರಣವನ್ನು ಸಹ ಅವರು ದಾಖಲಿಸಿದ್ದರು. `2021-22ನೇ ಸಾಲಿನಲ್ಲಿ ಸಂಘದ ಅಧ್ಯಕ್ಷರಾದ ಸುಬ್ರಾಯ ಭಟ್ಟರ ಅಸಾಮಿ ಖಾತೆ ಸಾಲದ ಬಡ್ಡಿಯನ್ನು ಮತ್ತು ಅಸಲನ್ನು ನೈಜವಾಗಿ ಪಡೆದುಕೊಳ್ಳದೇ ಸಾಲದ ಮಿತಿಯನ್ನು ಹೆಚ್ಚಿಸಿ ಬಡ್ಡಿ ತುಂಬಿದAತೆ ಕೃತಕವಾಗಿ ತೋರಿಸಿದ್ದಾರೆ’ ಎಂಬುದು ಅವರ ಆರೋಪವಾಗಿತ್ತು. `ಅರ್ಹತೆ ಇಲ್ಲದಿದ್ದರೂ ತಮಗೆ ತಾವೇ ಸಾಲದ ಮಿತಿಯನ್ನು ಹೆಚ್ಚಿಸಿ ಮಂಜೂರಿ ಮಾಡಿಕೊಂಡಿದ್ದಾರೆ. ಈ ಮೂಲಕ ಸಂಘಕ್ಕೆ ಪೋಟ್ ನಿಯಮ ಮೀರಿ ಅಪಾರ ಪ್ರಮಾಣದ ಹಾನಿಯನ್ನು ಉಂಟು ಮಾಡಿದ್ದಾರೆ’ ಎಂದು ದೂರಿದ್ದರು.
ಅದೇ ರೀತಿ `ವಿವೇಕ ಸುಬ್ರಾಯ ಭಟ್ಟ ಅವರ ಹೆಸರಿಗೆ ಕೃತಕವಾಗಿ ತೋರಿಸಿ ಅರ್ಹತೆ ಇಲ್ಲದಿದ್ದರೂ ತಮಗೆ ತಾವೇ ಸಾಲದ ಮಿತಿಯನ್ನು ಹೆಚ್ಚಿಸಿ ಮಂಜೂರಿ ಮಾಡಿಕೊಂಡಿದ್ದಾರೆ. ತಮ್ಮ ಕುಟುಂಬದ ಸದಸ್ಯರಿಗೆ ಅರ್ಹತೆ ಇಲ್ಲದಿದ್ದರೂ ಸೂಕ್ತ ಭದ್ರತೆಯನ್ನು ಪಡೆಯದೇ ಅಪಾರ ಪ್ರಮಾಣದ ಸಾಲ ನೀಡಿ ಸಂಘಕ್ಕೆ ನಷ್ಟ ಮಾಡಿದ್ದಾರೆ. ಸಂಘದ ಸಂಪನ್ಮೂಲಗಳನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ’ ಎನ್ನುವ ಬಗ್ಗೆ ದಾಖಲೆ ಒದಗಿಸಿದ್ದರು. `ಅಧ್ಯಕ್ಷರ ಮತ್ತು ಕೆಡಿಸಿಸಿ ಮೇಲ್ವಿಚಾರಕರ ಪರಿಶೀಲನಾ ವರದಿಯಲ್ಲಿ ಹೆಂಡತಿ ಹೆಸರಿನಲ್ಲಿ ಪಡೆದ ಅಸಾಮಿ ಸಾಲವು ಕಟ್ಬಾಕಿ ಆಗಿದ್ದು ನಿಯಮಬಾಹಿರವಾಗಿ ಅವರಿಗೆ ರಿಯಾಯಿತಿ ನೀಡಿ ಠರಾವು ಮಾಡಿದ್ದಾರೆ. ಈ ಮೂಲಕ ಸಂಘಕ್ಕೆ ಅಪಾರ ಪ್ರಮಾಣದ ನಷ್ಟವನ್ನು ಉಂಟು ಮಾಡಿದ್ದಾರೆ’ ಎಂದು ದೂರಿದ್ದರು.
ಪ್ರಕಾಶ ರಾಮಚಂದ್ರ ಹೆಗಡೆ ಅವರ ದೂರು ಪರಿಗಣಿಸಿದ ಕೋರ್ಟ್ ಪ್ರತಿವಾದಿಗಳಿಗೆ 2024ರ ಅಕ್ಟೋಬರ್ 22ರಂದು ಕಚೇರಿಗೆ ಹಾಜರಾಗಿ ಅಹವಾಲನ್ನು ಹೇಳಿಕೊಳ್ಳಲು ಅವಕಾಶ ನೀಡಿತ್ತು. ಪ್ರತಿವಾದಿಗಳು ಲಿಖಿತ ಹೇಳಿಕೆಯನ್ನು ನೀಡಿ ತಮ್ಮ ಅಹವಾಲನ್ನು ಸಲ್ಲಿಸಿದ್ದರು. ವಾದ ಆಲಿಸಿದ ನ್ಯಾಯಾಲಯ ಸಂಘದ ಅಧ್ಯಕ್ಷ ಸುಬ್ರಾಯ ನಾರಾಯಣ ಭಟ್ಟ ಮತ್ತು ನಿರ್ದೇಶಕ ವಿವೇಕ ಸುಬ್ರಾಯ ಭಟ್ಟ ಅವರನ್ನು ಹುದ್ದೆಯಿಂದ ಕೆಳಗಿಳಿಸಿದೆ. ಮುಂದಿನ ಮೂರು ವರ್ಷದವರೆಗೆ ಸಹಕಾರ ಸಂಘಗಳ ಆಡಳಿತ ಮಂಡಳಿ ಚುನಾವಣೆಗೂ ಸ್ಪರ್ಧಿಸದಂತೆ ಸೂಚಿಸಿದೆ.




