ಸಿದ್ದಾಪುರ: ಹಾಲ್ಕಣಿಯ ಶರತ್ ಆಚಾರಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಭರತ ಸಿಂಗ್ ಎಂಬಾತನನ್ನು ಎಂಟು ವರ್ಷದ ನಂತರ ಪೊಲೀಸರು ಬಂಧಿಸಿದ್ದಾರೆ.
2016ರಲ್ಲಿ ಶರತ್ ಗಣೇಶ ಆಚಾರಿ ಕೊಲೆ ನಡೆದಿತ್ತು. ಆ ವೇಳೆ ತನಿಖೆ ನಡೆಸಿದ ಪೊಲೀಸರು ದಿಲ್ ರಾಜ ಎಂಬಾತನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಭರತ್ ಸಿಂಗ್ ಸಹ ಕೊಲೆ ಕೃತ್ಯದಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ, ಎಷ್ಟು ಹುಡುಕಿದರೂ ಆತ ಮಾತ್ರ ಸಿಕ್ಕಿರಲಿಲ್ಲ.
ಇದೀಗ ಭರತ್ ಸಿಂಗ್ ಉತ್ತರಖಂಡದಲ್ಲಿ ಅಡಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಈ ಹಿನ್ನಲೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹಾಗೂ ಡಿವೈಎಸ್ಪಿ ಗಣೇಶ ಕೆ ಎಲ್ ಒಂದು ತಂಡವನ್ನು ಅಲ್ಲಿಗೆ ಕಳುಹಿಸಿದರು. ಸಿಪಿಐ ಜೆಬಿ ಸೀತಾರಾಮ, ಪಿಎಸ್ಐ ಅನೀಲ ಜೊತೆ ಪೊಲೀಸ್ ಸಿಬ್ಬಂದಿ ರಾಜು ಎಂ, ವಿನ್ಸನ್ ಫರ್ನಾಂಡಿಸ್ ಸೇರಿ ಉಪಾಯವಾಗಿ ಭರತ್ ಸಿಂಗ್ ಸೆರೆಗಾಗಿ ಕಾರ್ಯತಂತ್ರ ರೂಪಿಸಿದರು.
ಉತ್ತರಾಖಂಡ ರಾಜ್ಯದ ನೈನಿತಾಲ ಬಳಿಯ ರಾಮನಗರಕ್ಕೆ ತೆರಳಿದ ಪೊಲೀಸರು ಆತನನ್ನು ತಾವಿದ್ದ ಪ್ರದೇಶಕ್ಕೆ ಕರೆಯಿಸಿಕೊಂಡು ತಕ್ಷಣ ಸುತ್ತುವರೆದರು. ಆತನನ್ನು ಬಂಧಿಸಿ ಶಿರಸಿಗೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.




