ಶಿರಸಿ: ಆಕಸ್ಮಿಕ ಅಗ್ನಿ ಅವಘಡದಿಂದ ಅಡಿಕೆ ತೋಟವೊಂದು ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ಶಿರಸಿ ಬಚಗಾಂವಿನ ಅಮರ ನೆರಲಕಟ್ಟೆ ಅವರು 1.30 ಎಕರೆ ಕೃಷಿಭೂಮಿ ಹೊಂದಿದ್ದರು. ಡಿಸಿಸಿ ಬ್ಯಾಂಕಿನಲ್ಲಿ 3.60 ಲಕ್ಷ ರೂ ಸಾಲ ಮಾಡಿ ಅವರು ಭೂಮಿಯ ಅಭಿವೃದ್ಧಿ ನಡೆಸಿದ್ದರು. ಇದರೊಂದಿಗೆ ಪ್ರಾಥಮಿಕ ಸಹಕಾರಿ ಸಂಘದಿAದಲೂ ಸಾಲ ಪಡೆದು ಅಡಿಕೆ ಗಿಡಗಳನ್ನು ನಾಟಿ ಮಾಡಿದ್ದರು. ಅಡಿಕೆ ಗಿಡಗಳಿಗೆ ನೀರುಣಿಸಲು ನೀರಾವರಿ ವ್ಯವಸ್ಥೆಯನ್ನು ಮಾಡಿದ್ದರು.
ಕಳೆದ ವರ್ಷ ಅವರು ನಾಟಿ ಮಾಡಿದ ಅಡಿಕೆ ಗಿಡಗಳು ಉತ್ತಮ ಬೆಳವಣಿಗೆಯನ್ನು ಹೊಂದಿದ್ದು, ಅವಲ್ಲೆವನ್ನು ಅಮರ್ ಅವರು ಮಕ್ಕಳಂತೆ ಜೋಪಾನ ಮಾಡಿಕೊಂಡಿದ್ದರು. ನಿತ್ಯ ಅಡಿಕೆ ಗಿಡಗಳಿಗೆ ನೀರುಣಿಸುವುದು ಹಾಗೂ ಅವುಗಳ ಆರೈಕೆ ಮಾಡುವುದು ಅವರ ಕಾಯಕವಾಗಿತ್ತು.
ಆದರೆ, ಇದೀಗ ಅಗ್ನಿ ಅವಘಡದಿಂದ ಅಲ್ಲಿದ್ದ ಅಡಿಕೆ ಗಿಡಗಳು ಕರಕಲಾಗಿವೆ. ಐದಾರು ಗಿಡಗಳು ಮಾತ್ರ ಹಳದಿ ಬಣ್ಣಕ್ಕೆ ತಿರುಗಿವೆ. ಅಗ್ನಿಯ ಜ್ವಾಲೆಗೆ ನೀರಾವರಿ ಪೈಪುಗಳು ಮೆದುವಾಗಿವೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ನಡೆಸಿದರು. ಲಕ್ಷಾಂತರ ರೂ ವೆಚ್ಚ ಮಾಡಿ ಬೆಳೆಸಿದ ಗಿಡಗಳನ್ನು ಕಳೆದುಕೊಂಡಿರುವ ಅಮರ್ ನೆರಲೆಕಟ್ಟೆ ಅವರು ಕಣ್ಣೀರಾಗಿದ್ದಾರೆ.




