ಕಾರವಾರ: ಕಳೆದ 12 ವರ್ಷಗಳಿಂದ ಹೆಸ್ಕಾಂ ಕಚೇರಿಯಲ್ಲಿ ಬೀಡು ಬಿಟ್ಟಿದ್ದ ಸಹಾಯಕ ಕಾರ್ಯನಿರ್ವಾಹಕ ವೀರಣ್ಣ ಶೇಬಣ್ಣನವರ್ ಅವರನ್ನು ಹುಬ್ಬಳ್ಳಿಗೆ ವರ್ಗಾಯಿಸಲಾಗಿದೆ. ಈ ವರ್ಗಾವಣೆಯ ಹಿಂದೆ ಅವರದ್ದೇ ಕಾರು ಚಾಲಕನಾಗಿದ್ದ ರಾಜು ಬಾಂದೇಕರ್ ಅವರ ಹೋರಾಟವಿದೆ!
ಕಳೆದ ವರ್ಷ ವೀರಣ್ಣ ಶೇಬಣ್ಣನವರ್ ಹಾಗೂ ಗುತ್ತಿಗೆ ನೌಕರ ರಾಜು ಬಾಂದೇಕರ್ ನಡುವೆ ಬಾಂಡಿಶೆಟ್ಟಾದ ಬಳಿ ಹೊಡೆದಾಟ ನಡೆದಿತ್ತು. ರಾಜು ಅವರನ್ನು ಕೆಲಸದಿಂದ ತೆಗೆಯುವುದಾಗಿ ವೀರಣ್ಣ ಅವರು ಘೋಷಿಸಿದ್ದರು. ಅದಕ್ಕೆ ಪ್ರತಿಯಾಗಿ ರಾಜು ಸಹ `ನಿಮ್ಮನ್ನು ಇಲ್ಲಿಂದ ವರ್ಗಾಯಿಸುವೆ’ ಎಂದು ಸವಾಲು ಹಾಕಿದ್ದರು. ಕೊನೆಗೆ ಪೊಲೀಸ್ ಠಾಣೆಯಲ್ಲಿ ಅದು ರಾಜಿಯಾದರೂ ಇಬ್ಬರ ನಡುವೆ ವೈಮನಸ್ಸು ಮುಂದುವರೆದಿತ್ತು.
ವೀರಣ್ಣ ಅವರ ಕಾಟ ತಾಳಲಾರದೇ ಅನೇಕ ಗುತ್ತಿಗೆದಾರರು ಸಹ ಮೇಲಧಿಕಾರಿಗಳಿಗೆ ದೂರು ನೀಡಿದ್ದರು. ಈ ಬಗ್ಗೆ ಕೆಲ ಪತ್ರ ವ್ಯವಹಾರಗಳು ನಡೆದಿದ್ದವು. ವೀರೇಶ ಶೇಬಣ್ಣನವರ ವರ್ತನೆಗೆ ಕೆಲ ಜನಪ್ರತಿನಿಧಿಗಳು ತಿರುಗಿ ಬಿದ್ದಿದ್ದರು. ರಾಜಕಾರಣಿಗಳ ಪ್ರಭಾವ ಬೀರಿ ಅದೇ ಹುದ್ದೆಯಲ್ಲಿ ಮುಂದುವರೆಯುತ್ತಿರುವ ಬಗ್ಗೆಯೂ ಗುತ್ತಿಗೆದಾರರು ಆರೋಪಿಸಿದ್ದರು.ಅದಾಗಿಯೂ ಅವರ ವರ್ಗಾವಣೆ ಸಾಧ್ಯವಾಗಿರಲಿಲ್ಲ. ಚಾಲಕ ಸವಾಲು ಹಾಕಿದ ವರ್ಷದೊಳಗೆ ಹೆಸ್ಕಾಂ ವೀರಣ್ಣ ಶೇಬಣ್ಣನವರ್ ಅವರನ್ನು ಹುಬ್ಬಳ್ಳಿ ಕಚೇರಿಗೆ ವರ್ಗಾಯಿಸಿದೆ.




