ಯಲ್ಲಾಪುರ: ವಿವಾಹಿತ ಮಹಿಳೆ ಫೋನ್ ಕರೆಗೆ ಓಡೋಡಿ ಹೋದ ನರಸಿಂಹ ಮರಾಠಿ ಅವರಿಗೆ ಆ ಮಹಿಳೆಯ ಪತಿ, ಮಗ ಹಾಗೂ ಇನ್ನೊಬ್ಬ ಸೇರಿ ಧರ್ಮದೇಟು ನೀಡಿದ್ದಾರೆ!
ಕುಂದರಗಿ ಬೆಳ್ಳಂಬೆಯ ನರಸಿಂಹ ಮರಾಠಿ (40) ಹಾಗೂ ಸುಮಿಕ್ಷಾ ಮರಾಠಿ (ಹೆಸರು ಬದಲಿಸಿದೆ) ನಡುವೆ ಅಕ್ರಮ ಸಂಬoಧ ಇರುವ ಬಗ್ಗೆ ಸುಮೀಕ್ಷಾರ ಪತಿ ಸುರೇಶ ಮರಾಠಿ ಅವರಿಗೆ ಅನುಮಾನ ಕಾಡಿದೆ. ಈ ಅನುಮಾನ ಬಗೆಹರಿಸಿಕೊಳ್ಳುವುದಕ್ಕಾಗಿ ನ 25ರ ಸಂಜೆ ಸುರೇಶ ಮರಾಠಿ ಪತ್ನಿ ಮೊಬೈಲಿನಿಂದ ನರಸಿಂಹ ಮರಾಠಿ ಅವರಿಗೆ ಫೋನ್ ಮಾಡಿಸಿದ್ದಾರೆ. `ಎನ್ ಎಸ್ ಹೆಗಡೆ ಅವರ ತೋಟಕ್ಕೆ ಬಾ’ ಎಂದು ನರಸಿಂಹ ಮರಾಠಿ ಅವರನ್ನು ಕರೆಯಿಸಿಕೊಂಡಿದ್ದಾರೆ.
ಅಲ್ಲಿಗೆ ನರಸಿಂಹ ಮರಾಠಿ ಹೋದಾಗ ಸುರೇಶ ಮರಾಠಿ, ಅವರ ಪತ್ನಿ ಸುಮಿಕ್ಷಾ ಮರಾಠಿ, ಮಗ ಕವೀಂದ್ರ ಮರಾಠಿ ಹಾಗೂ ಮತ್ತೊಬ್ಬ ಯೋಗೇಶ ಮರಾಠಿ ಸೇರಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ಸುರೇಶ ಮರಾಠಿ ಹಾಗೂ ಅವರ ಪತ್ನಿ ಸುಮೀಕ್ಷಾ ಮರಾಠಿ ಸೇರಿ ನರಸಿಂಹ ಮರಾಠಿಗೆ ದೊಣ್ಣೆಯಿಂದ ಬಡಿದಿದ್ದಾರೆ. ಕವೀಂದ್ರ ಮರಾಠಿ ಹಾಗೂ ಯೋಗೇಶ ಮರಾಠಿ ಸೇರಿ ನರಸಿಂಹರ ಕಣ್ಣು, ಕಿವಿ, ಮೂಗಿಗೆ ರಕ್ತ ಬರುವಂತೆ ಗುದ್ದಿದ್ದಾರೆ. ಆ ಮೂಲಕ ಸುಮೀಕ್ಷಾ ಮರಾಠಿ ಅವರು ತನ್ನ ಗಂಡನಿಗೆ ಇದ್ದ ಅನುಮಾನವನ್ನು ದೂರ ಮಾಡಿದ್ದಾರೆ.
ಗಾಯಗೊಂಡು ಬಿದ್ದಿದ್ದ ನರಸಿಂಹ ಮರಾಠಿ ಅವರನ್ನು ಅವರ ಪತ್ನಿ ಶಶಿಕಲಾ ಮರಾಠಿ ಆಸ್ಪತ್ರೆಗೆ ದಾಖಲಿಸಿದರು. ನಂತರ ಈ ಬಗ್ಗೆ ಹಿರಿಯವರಲ್ಲಿ ಚರ್ಚಿಸಿ ಹಲ್ಲೆ ಮಾಡಿದ ನಾಲ್ವರ ವಿರುದ್ಧ ಪೊಲೀಸ್ ದೂರು ದಾಖಲಿಸಿದರು. ಪೊಲೀಸ್ ಸಿಬ್ಬಂದಿ ಸಂತೋಷ ನಾಯ್ಕ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.




