ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲ್ಚಾವಣಿ ಮೇಲೆ ಸೋಲಾರ್ ಘಟಕ ಸ್ಥಾಪಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಈ ಬಗ್ಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ತಕ್ಷಣದಿಂದಲೇ ಕಾರ್ಯೊನ್ಮುಖರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಅಹಮದ್ ಮುಲ್ಲಾ ಸೂಚಿಸಿದ್ದಾರೆ.
ವಿವಿಧ ಸರ್ಕಾರಿ ಕಚೇರಿ ವಿದ್ಯುತ್ ಬಾಕಿ ಹಿನ್ನಲೆ ಹೆಸ್ಕಾಂ ಜಿಲ್ಲೆಯ ಹಲವು ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಕುಮಟಾ ಮಿನಿವಿಧಾನಸೌಧ, ಯಲ್ಲಾಪುರದ ಇಂದಿರಾ ಕ್ಯಾಂಟೀನ್, ಭಟ್ಕಳದ ಕೆಲ ಇಲಾಖೆಗಳಿಗೆ ಸಹ ವಿದ್ಯುತ್ ಬಿಲ್ ಬಿಸಿ ತಾಗಿತ್ತು.
ಪ್ರಸ್ತುತ ಅಧೀನ ಅಧಿಕಾರಿಗಳ ಸಭೆ ನಡೆಸಿದ ಅಪರ ಜಿಲ್ಲಾಧಿಕಾರಿ `ಸಾಂಪ್ರದಾಯಿಕ ವಿದ್ಯುತ್ ಮೂಲಗಳು ಕಾಲಕ್ರಮೇಣ ನಶಿಸಲಿದ್ದು, ಸೂರ್ಯಶಕ್ತಿಯಿಂದ ದೊರೆಯುವ ವಿದ್ಯುತ್’ಗೆ ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಆದ್ದರಿಂದ ವಿದ್ಯುತ್ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಜಿಲ್ಲೆಯ ಸರಕಾರಿ ಕಚೇರಿಗಳು ಸಾರ್ವಜನಿಕರಿಗೆ ಮಾದರಿಯಾಗಿ ತಮ್ಮ ಕಟ್ಟಡಗಳ ಮೇಲ್ಚಾವಣಿಯಲ್ಲಿ ಸೋಲಾರ್ ಘಟಕಗಳನ್ನು ಅಳವಡಿಸಬೇಕು’ ಎಂದರು. ಈ ಬಗ್ಗೆ 15 ದಿನಗಳ ಒಳಗೆ ವರದಿ ಸಲ್ಲಿಸುವಂತೆಯೂ ಅವರು ಸೂಚಿಸಿದರು.




