ಭೂ ಕಂಪನ ಕಾರಣ ಅಧ್ಯಯನ ಹಾಗೂ ಸಂಶೋಧನೆಗಾಗಿ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿರುವ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಜ್ಞಾನಿಗಳಿಬ್ಬರು ಶಿರಸಿ-ಕುಮಟಾ ರಸ್ತೆಯಲ್ಲಿ ಸಂಚಾರ ನಡೆಸಿದರು. ಅಲ್ಲಿನ ಹೊಂಡಗಳನ್ನು ನೋಡಿ ಕಕ್ಕಾಬಿಕ್ಕಿಯಾದರು!
ಸೋಮವಾರ ಮಧ್ಯಾಹ್ನ 3 ಗಂಟೆಗೆ ಶಿರಸಿಗೆ ಆಗಮಿಸಿದ ಅವರು ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಭೂ ಕಂಪನ ಅನುಭವವಾದ ದಿಕ್ಕಿನ ಕಡೆ ಚಲಿಸಿದರು. ದೇವಿಮನೆ, ರಾಗಿ ಹೊಸಳ್ಳಿ, ಮತ್ತಿಘಟ್ಟ, ದೇವನಳ್ಳಿ ಭಾಗದಲ್ಲಿ ವಿಜ್ಞಾನಿ ಜಗದೀಶ ಹಾಗೂ ಸಂತೋಷ್ ಓಡಾಟ ನಡೆಸಿದರು. ಆ ಪ್ರದೇಶದಲ್ಲಿನ ಭೂಮಿಯ ಪದರ ಹಾಗೂ ಮಣ್ಣು ಸಡಿಲವಾಗಿರುವ ಲಕ್ಷಣಗಳನ್ನು ಪರಿಶೀಲಿಸಿದರು. ತಮ್ಮ ಈ ಪ್ರಯಾಣದಲ್ಲಿ ರಸ್ತೆ ಹಾಳಾಗಿರುವ ಹಾಗೂ ಧೂಳಿನ ಬಗ್ಗೆ ಮರ್ನಾಲ್ಕು ಬಾರಿ ಮಾತನಾಡಿದರು.
ಶಿರಸಿ-ಕುಮಟಾ ರಸ್ತೆ ಹೊಂಡಗಳಿAದ ಕೂಡಿದ್ದರಿಂದ ವಿಜ್ಞಾನಿಗಳು ಆಯಾಸಗೊಂಡರು. ಸಂಜೆ 6.30ರ ಅವಧಿ ಆಗಿದ್ದರಿಂದ ಅಲ್ಲಿಂದ ಶಿರಸಿಗೆ ಮರಳಿದರು. ಈ ಮಾರ್ಗದ ರಸ್ತೆ ಸಂಚಾರ ನಿಷೇಧವಿದ್ದರೂ ಕಂದಾಯ ಅಧಿಕಾರಿಗಳು ಅನಿವಾರ್ಯವಾಗಿ ವಿಜ್ಞಾನಿಗಳನ್ನು ಆ ಮಾರ್ಗದಲ್ಲಿ ಓಡಾಡಿಸಿದರು.
ಮಂಗಳವಾರ ಬೆಳಗ್ಗೆ ಅವರು ಯಾಣ ಬಳಿ ತೆರಳಲಿದ್ದಾರೆ. ಭೂ ಕಂಪನ ನಡೆದ ಸ್ಥಳ ಪರಿಶೀಲನೆ ನಡೆಸಿ ಆ ಬಗ್ಗೆ ಅಧ್ಯಯನ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಿದ್ದಾರೆ. `ಮತ್ತೆ ಕಂಪನ ಆದಲ್ಲಿ ಆತಂಕಕ್ಕೆ ಒಳಗಾಗುವುದು ಬೇಡ. ಬಯಲು ಪ್ರದೇಶಕ್ಕೆ ತೆರಳುವುದು ಉತ್ತಮ’ ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.




