ಕಾರವಾರ: SSLC ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ಸಾಧನೆ ಮಾಡಿದ್ದ ಶ್ರೀಕಲಾ ನಾಯಕ ಹಾಗೂ ಭಾಗೀರಥಿ ರಾಣೆ ಅವರು ಆ ವೇಳೆ ಮಾಡಿದ ಸಾಧನೆಗಾಗಿ 30 ವರ್ಷದ ನಂತರ ಸನ್ಮಾನ ಸ್ವೀಕರಿಸಿದರು!
ಶ್ರೀಕಲಾ ನಾಯಕ ಗೋವಾದಲ್ಲಿ ವಾಸವಾಗಿದ್ದಾರೆ. ಅವರು ಪೋಂಡಾದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಭಾಗೀರಥಿ ರಾಣೆ ಅವರು ಜೊಯಿಡಾದಲ್ಲಿ ವಾಸವಾಗಿದ್ದಾರೆ. ಅವರು ಅಲ್ಲಿನ ಆಸು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. 1994ರ ಅವಧಿಯಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ಚಿತ್ತಾಕುಲದ ಶಿವಾಜಿ ವಿದ್ಯಾಲಯದಲ್ಲಿ ಕಲಿಯುತ್ತಿದ್ದರು. ಶ್ರೀಕಲಾ ನಾಯಕ ಅವರು ಮರಾಠಿ ವಿಭಾಗದಲ್ಲಿ ಹಾಗೂ ಭಾಗೀರಥಿ ರಾಣೆ ಅವರು ಕನ್ನಡ ವಿಭಾಗದಲ್ಲಿ ಅತ್ಯಂತ ಶಿಸ್ತಿನಿಂದ ಅಧ್ಯಯನ ಮಾಡುತ್ತಿದ್ದರು. ಓದುವುದರ ಜೊತೆ ಇನ್ನಿತರ ಚಟುವಟಿಕೆಗಳಲ್ಲಿ ಸಹ ಮುಂದಿದ್ದರು.
ಶ್ರೀಕಲಾ ನಾಯಕ ಅವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 76ರಷ್ಟು ಫಲಿತಾಂಶ ಪಡೆದು ಶಾಲೆಗೆ ಮೊದಲಿಗರಾಗಿದ್ದರು. ಭಾಗೀರಥಿ ರಾಣೆ ಅವರು ಶೇ 72ರ ಫಲಿತಾಂಶ ಪಡೆದು ತರಗತಿಗೆ ಮೊದಲಿಗರಾಗಿ ಗುರುತಿಸಿಕೊಂಡಿದ್ದರು. ಎಸ್ಎಸ್ಎಲ್ಸಿ ಪರೀಕ್ಷೆ ನಂತರ ಎಲ್ಲರೂ ದೂರವಾಗಿದ್ದರು. ಆ ವೇಳೆ ಸಾಧನೆ ಮಾಡಿದವರಿಗೆ ಸನ್ಮಾನಿಸಲು ಸಾಧ್ಯವಾಗಿರಲಿಲ್ಲ. ಆ ನಂತರ ಒಬ್ಬರಿಗೆ ಒಬ್ಬರು ಸಂಪರ್ಕದಲ್ಲಿಯೂ ಇರಲಿಲ್ಲ.
1994ನೇ ಬ್ಯಾಚಿನ ಎಲ್ಲಾ ವಿದ್ಯಾರ್ಥಿಗಳನ್ನು ಮತ್ತೆ ಒಂದಾಗಿಸಬೇಕು ಎಂದು ಆ ವೇಳೆ ಅದೇ ತರಗತಿಯಲ್ಲಿ ಕಲಿತಿದ್ದ ಶ್ರೀಪಾದ ರಾಣೆ ಯೋಚಿಸಿದರು. ಪ್ರಸ್ತುತ ಗೋವಾದ ಪ್ರತಿಷ್ಠಿತ ಹೊಟೇಲ್’ನಲ್ಲಿ ಉನ್ನತ ಹುದ್ದೆಯಲ್ಲಿರುವ ಅವರಿಗೆ ಆಕಸ್ಮಿಕವಾಗಿ ಆ ಇಬ್ಬರು ಸಹಪಾಠಿಗಳು ಸಿಕ್ಕರು. ಅವರೆಲ್ಲರೂ ಸೇರಿ ಐದು ಜನ ಸದಸ್ಯರಿರುವ ವಾಟ್ಸಪ್ ಗುಂಪು ರಚಿಸಿದರು. ಅದಾದ ನಂತರ ನಾಲ್ಕು ತಿಂಗಳ ಕಾಲ ಆ ಐದು ಜನ ತಮ್ಮ ತರಗತಿಯಲ್ಲಿದ್ದವರ ಮನೆ ಮನೆ ಭೇಟಿ ಮಾಡಿ ಎಲ್ಲರನ್ನು ಸಂಪರ್ಕ ಮಾಡಿದರು. ಮದುವೆ ಆದ ಹೆಣ್ಣು ಮಕ್ಕಳ ಮನೆ ವಿಳಾಸ, ಫೋನ್ ನಂ ಪತ್ತೆ ಮಾಡಿ ಅವರನ್ನು ವಾಟ್ಸಪ್ ಬಳಗಕ್ಕೆ ಸೇರಿಸಿದರು.

ಇದಾದ ನಂತರ ಎಲ್ಲರೂ ಸೇರಿ ತಾವು ಕಲಿತ ಶಾಲೆಯಲ್ಲಿ ಮತ್ತೆ ಸೇರುವ ನಿರ್ಧಾರ ಮಾಡಿದರು. 35ಕ್ಕೂ ಅಧಿಕ ಹಳೆಯ ವಿದ್ಯಾರ್ಥಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದರು. ಆ ವೇಳೆ ಕಲಿಸಿದ ಶಿಕ್ಷಕರ ಮನೆಗೆ ಹೋಗಿ ವಿಷಯ ಮುಟ್ಟಿಸಿದರು. ಬದುಕಿರುವ ಶಿಕ್ಷಕರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಿದರು. ಬದುಕಿಲ್ಲದ ಶಿಕ್ಷಕರ ಭಾವಚಿತ್ರಗಳಿಗೆ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿದರು. ಎಲ್ಲರೂ ಒಂದಾಗಿರುವುದನ್ನು ನೋಡಿ ಮಕ್ಕಳಿಗೆ ಪಾಠ ಮಾಡಿದ ಸಿ ಬಿ ರಾಣೆ ಅವರು ಸಹ ಈ ವೇಳೆ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಶ್ರೀಕಲಾ ನಾಯಕ ಹಾಗೂ ಭಾಗೀರಥಿ ರಾಣೆ ಅವರಿಗೆ ಅವರ ಸಹಪಾಠಿಗಳೆಲ್ಲರೂ ಸೇರಿ ಸನ್ಮಾನಿಸಿದರು. `ತಾವು ಇಲ್ಲಿ ಶಿಸ್ತಿನಿಂದ ಕಲಿತ ಶಿಕ್ಷಣವನ್ನು ಈಗಿನ ಮಕ್ಕಳಿಗೆ ಕಲಿಸುತ್ತಿದ್ದೇವೆ’ ಎಂದು ಸನ್ಮಾನಿತ ಶಿಕ್ಷಕರು ಹೇಳಿಕೊಂಡರು.




