ಯಲ್ಲಾಪುರ: ತೆರಿಗೆ ವಸೂಲಾತಿ ಅಭಿಯಾನದಲ್ಲಿ ಶೇ 100ರ ಸಾಧನೆ ಮಾಡಿದ ಆನಗೋಡು ಗ್ರಾಮ ಪಂಚಾಯತ ಅಧಿಕಾರಿ-ಸಿಬ್ಬಂದಿಗೆ ಸರ್ಕಾರದ ಸನ್ಮಾನ ಸಿಕ್ಕಿದೆ. ಆನಗೋಡು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ನಾರಾಯಣ ಗೌಡ ಹಾಗೂ ತೆರಿಗೆ ಸಂಗ್ರಹಕಾರ ಗಣಪತಿ ಮಳಿಕ್ ಈ ಗೌರವ ಸ್ವೀಕರಿಸಿದರು.
ಜಿ ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದು ಅವರ ಸೂಚನೆ ಮೇರೆಗೆ ಸಾಧಕ ನೌಕರರಿಗೆ ಯಲ್ಲಾಪುರದ ತಾಲೂಕು ಪಂಚಾಯತ ಸಭಾಭವನದಲ್ಲಿ ಗೌರವಿಸಲಾಗಿದೆ. ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಧನವಾಡಕರ, ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ ಆಗೇರ, ತಾಲೂಕಾ ಯೋಜನಾಧಿಕಾರಿ ರಾಘವ ಸ್ಮರಣಿಕೆ – ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಡಿಸೆಂಬರ್ 12ರಂದು ನಡೆದ ತೆರಿಗೆ ವಸುಲಾತಿ ಅಭಿಯಾನದಲ್ಲಿ ಆನಗೋಡು ಗ್ರಾಮ ಪಂಚಾಯತ ಶೇ 100ರಷ್ಟು ತೆರಿಗೆ ಸಂಗ್ರಹಿಸಿದಕ್ಕಾಗಿ ಈ ಪುರಸ್ಕಾರ ದೊರೆತಿದೆ. ಇದರೊಂದಿಗೆ ತೆರಿಗೆ ಸಂಗ್ರಹದಲ್ಲಿ ಸಾಧನೆ ಮಾಡಿದ ಹಿತ್ಲಳ್ಳಿ, ಕಣ್ಣಿಗೇರಿ, ಕಿರವತ್ತಿ, ಮಂಚಿಕೇರಿ, ಮದನೂರ, ಇಡಗುಂದಿ, ಮಾವಿನಮನೆ, ಹಾಸಣಗಿ ಗ್ರಾಮ ಪಂಚಾಯತಗಳ ಕಾರ್ಯಕ್ಕೂ ಮೆಚ್ಚುಗೆ ಸೂಚಿಸಲಾಯಿತು.
`ಅಧ್ಯಕ್ಷ-ಉಪಾಧ್ಯಕ್ಷರ ಜೊತೆ ಸರ್ವ ಸದಸ್ಯರ ಸಹಕಾರ ಹಾಗೂ ಗ್ರಾಮಸ್ಥರ ನೆರವಿನಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಪಿಡಿಓ ನಾರಾಯಣ ಗೌಡ ಪ್ರತಿಕ್ರಿಯಿಸಿದರು.




