ಕಾರವಾರ: ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು 47 ವರ್ಷ ಪೂರೈಸಿ 48ನೇ ವರ್ಷಕ್ಕೆ ಪ್ರವೇಶಿಸಿದ್ದಾರೆ. ಡಿ 20ರ ಶುಕ್ರವಾರ ಹುಟ್ಟುಹಬ್ಬದ ಹಿನ್ನಲೆ ನೂರಾರು ಸಂಖ್ಯೆಯ ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಯವರು ಎಂ ನಾರಾಯಣ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಿದರು.
ಬೆಂಗಳೂರು, ಬೆಳಗಾವಿ, ಕೋಲಾರ ಸೇರಿ ರಾಜ್ಯದ ನಾನಾ ಮೂಲೆಗಳಲ್ಲಿ ಕರ್ತವ್ಯ ನಿಭಾಯಿಸಿದ್ದ ಎಂ ನಾರಾಯಣ ಅವರು ಜುಲೈ 4ರಂದು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಇದಕ್ಕೂ ಮುನ್ನ ಲೋಕಾಯುಕ್ತ, ಗುಪ್ತಚರ, ಆಂತರಿಕ ಭದ್ರತೆ, ವಿದ್ಯುತ್ ಜಾಗೃತದಳ ಸೇರಿ ಪೊಲೀಸ್ ಇಲಾಖೆಯ ಹಲವು ವಿಭಾಗದಲ್ಲಿ ಸೇವೆ ಸಲ್ಲಿಸಿ ಅನುಭವ ಪಡೆದಿದ್ದರು. ಉತ್ತರ ಕನ್ನಡ ಪ್ರವೇಶಿಸಿದ ಮೊದಲು ಅವರು ಎಲ್ಲಾ ತಾಲೂಕುಗಳನ್ನು ಸುತ್ತಾಡಿದರು. ಪೊಲೀಸ್ ಅಧಿಕಾರಿ ಹಾಗೂ ಪೊಲೀಸ್ ಪೇದೆ ನಡುವಿನ ಅಂತರವನ್ನು ಭರ್ತಿ ಮಾಡಿ, ಅವರ ವಿಶ್ವಾಸಗಳಿಸಿದರು. ಈ ಕಾರಣದಿಂದಲೇ ಜಿಲ್ಲೆಯ ಮೂಲೆ ಮೂಲೆಯ ಮಾಹಿತಿಯನ್ನು ತಮ್ಮ ಸಿಬ್ಬಂದಿ ಮೂಲಕ ಸಂಗ್ರಹಿಸಿ ಅಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಶುರು ಮಾಡಿದರು.
ಎಲ್ಲಕ್ಕಿಂತ ಮುಖ್ಯವಾಗಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಎಂ ನಾರಾಯಣ ಅವರು ಹಲವು ಬಗೆಯ ಚಿಂತನೆ ನಡೆಸಿದರು. ಸರ್ಕಾರಕ್ಕೆ ಹೆಚ್ಚುವರಿ ಖರ್ಚಿಲ್ಲದ ರೀತಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು. ತಮ್ಮಲ್ಲಿರುವ ಸಂಪನ್ಮೂಲಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ನಿರಂತರ ಜಾಗೃತಿಯ ಕೆಲಸ ಮಾಡಿದರು. ಶಾಲಾ-ಕಾಲೇಜು ಭೇಟಿ, ಸಾಮಾಜಿಕ ಜಾಲತಾಣಗಳ ಸದ್ಬಳಕೆ, ಅಪರಾಧ ತಡೆಗೆ ಕೈಗೊಳ್ಳುವ ಕ್ರಮಗಳ ಬಗ್ಗೆ ಮೊದಲು ಪೊಲೀಸರಿಗೆ ತಿಳುವಳಿಕೆ ಮೂಡಿಸಿದರು. ಆ ಮೂಲಕ ಅದನ್ನು ಜನರಿಗೂ ಕಲಿಸುವ ಪ್ರಯತ್ನ ಮಾಡಿದರು.
ಶಿರೂರು ಗುಡ್ಡ ಕುಸಿತ, ಕಾಳಿ ನದಿ ಸೇತುವೆ ಕುಸಿತದ ಅವಧಿ ಎಂ ನಾರಾಯಣ ಅವರ ಪಾಲಿಗೆ ಸಾಕಷ್ಟು ಸವಾಲು ಒಡ್ಡಿದ್ದವು. ಅದನ್ನು ಅವರು ಎದುರಿಸಿದರು. ಜನರ ರಕ್ಷಣೆಗಾಗಿ ಸಾಕಷ್ಟು ಶ್ರಮಿಸಿದರು. ತಮ್ಮ ಮೇಲಿನ ಆರೋಪಗಳನ್ನು ಅವರು ಗಂಭೀರವಾಗಿ ಸ್ವೀಕರಿಸದೇ ಹಗಲಿರುಳು ಅಲ್ಲಿಯೇ ಇದ್ದು ಕಾರ್ಯಾಚರಣೆಯಲ್ಲಿ ತೊಡಗಿದರು. ಪೊಲೀಸ್ ಸಿಬ್ಬಂದಿಯ ವೈಯಕ್ತಿಕ ಜೀವನದ ಸಮಸ್ಯೆಗಳನ್ನು ಅರಿತು ಅವರಿಗೆ ಸ್ಪಂದಿಸಿದರು. ಅಧೀನ ಅಧಿಕಾರಿ-ಸಿಬ್ಬಂದಿ ಒಳ್ಳೆ ಕೆಲಸ ಮಾಡಿದಾಗ ಅವರನ್ನು ಹುರಿದುಂಬಿಸುತ್ತಿದ್ದರು. ತಪ್ಪು ಮಾಡಿದಾಗ ಅಳುಕಿಲ್ಲದೇ ಶಿಕ್ಷಿಸುತ್ತಿದ್ದರು. ಈ ಎಲ್ಲದರ ನಡುವೆ ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಸಹ ಎಂ ನಾರಾಯಣ ಅವರು ಹಿಂದೆ ಬೀಳಲಿಲ್ಲ. ಎಂ ನಾರಾಯಣ ಅವರು 48ನೇ ವರ್ಷಕ್ಕೆ ಪ್ರವೇಶಿಸುತ್ತಿರುವ ಈ ದಿನ ಅವರ ಬೆಂಬಲಿಗರು ಐದು ತಿಂಗಳ ಅವಧಿಯಲ್ಲಿ ಎಂ ನಾರಾಯಣ ಅವರು ಮಾಡಿದ ಕೆಲಸಗಳನ್ನು ಮೆಲಕು ಹಾಕಿದರು.
ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಶುಕ್ರವಾರ ಅವರ ಮನೆಗೆ ತೆರಳಿ ಹುಟ್ಟುಹಬ್ಬದ ಶುಭಾಶಯ ಕೋರಿದರು. `ಎಂ ನಾರಾಯಣ ಅವರು ಪೊಲೀಸ್ ಅಧೀಕ್ಷಕರಾಗಿ ಜಿಲ್ಲೆಗೆ ಬಂದ ಮೇಲೆ ಸಾಕಷ್ಟು ಬದಲಾವಣೆಗಳಾಗಿವೆ. ಅಕ್ರಮ ನಡೆಸುವವರ ವಿರುದ್ಧ ನಿರಂತರ ಪ್ರಕರಣ ದಾಖಲಿಸುವ ಅವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ’ ಎಂದು ಮಾಧವ ನಾಯಕ ಅವರು ಸ್ಮರಿಸಿದರು. ಈ ವೇಳೆ ಜನಶಕ್ತಿ ವೇದಿಕೆಯ ರವಿ ರಾತೋಡ್, ಮಂಜುನಾಥ ರಾತೋಡ್, ನಾಗೇಂದ್ರ ನಾಯ್ಕ ಅಂಕೋಲ, ರಾಜೇಂದ್ರ ಅಂಚೆಕರ್ ಇತರರು ಎಂ ನಾರಾಯಣ ಅವರನ್ನು ಭೇಟಿ ಮಾಡಿ, ಶುಭ ಕೋರಿದರು.




