ಮುoಡಗೋಡ: ಐದಾರು ಲಕ್ಷ ರೂಪಾಯಿಗೆ 1 ಕೆಜಿ ಬಂಗಾರ ಸಿಗುವ ಆಸೆಗೆ ಬಿದ್ದ ಮೆಹಬೂಬ್ ಅಲಿ ಕಾಸು ಕೊಟ್ಟು ಕೆಟ್ಟಿದ್ದಾರೆ!
ಯಲ್ಲಾಪುರದಲ್ಲಿ ಟೈಲ್ಸ ವ್ಯಾಪಾರ ಮಾಡುವ ಮೆಹಬೂಬ್ ಅಲಿ ಅವರ ಅಂಗಡಿಗೆ ಡಿ 17ರಂದು ರಾಜಸ್ಥಾನದ ಬಾಳು ಮಾರವಾಡಿ ಹಾಗೂ ಕಿಶನ್ ಮಾರವಾಡಿ ಬಂದಿದ್ದರು. ಟೈಲ್ಸ್ ಅಂಗಡಿಯಲ್ಲಿದ್ದ ದೇವರ ಫೋಟೋ ಜೊತೆ ವೈಟ್ ಸಿಮೆಂಟನ್ನು ಅವರು ಖರೀದಿಸಿದ್ದರು.
ಡಿ 18ರಂದು ಮೆಹಬೂಬ್ ಅಲಿ ಅವರಿಗೆ ಫೋನ್ ಮಾಡಿದ ಮಾರವಾಡಿ ಜೋಡಿ `ತಾವು ಗಾರೆ ಕೆಲಸ ಮಾಡುವಾಗ 1 ಕೆಜಿ ಬಂಗಾರ ಸಿಕ್ಕಿದೆ’ ಎಂದು ಹೇಳಿದ್ದರು. `ನಮಗೆ ಬೇರೆಯವರ ಬಗ್ಗೆ ನಂಬಿಕೆ ಇಲ್ಲ. ಬಂಗಾರ ಪಡೆದು ಎಲ್ಲರೂ ಮೋಸ ಮಾಡುತ್ತಾರೆ. ನಿಮ್ಮ ಮೇಲೆ ನಮಗೆ ನಂಬಿಕೆಯಿದ್ದು, ಈ ಬಂಗಾರ ಕೊಟ್ಟು ಕಾಸು ಕೊಡಿ’ ಎಂದು ಕೇಳಿಕೊಂಡಿದ್ದರು.
ಕಡಿಮೆ ಬೆಲೆಗೆ ಬಂಗಾರ ಸಿಗುವ ಆಸೆಗೆ ಬಿದ್ದ ಮೆಹಬೂಬ್ ಅಲಿ ಚೌಕಾಸಿ ಮಾಡಿದ್ದರು. ಈ ನಡುವೆ ಪರೀಕ್ಷೆಗಾಗಿ ಒಂದು ಬಂಗಾರದ ಗುಂಡನ್ನು ಮಾರವಾಡಿ ಜೋಡಿ ಕೊಟ್ಟಿದ್ದರು. `1 ಕೆಜಿ ಬಂಗಾರಕ್ಕೆ 20 ಲಕ್ಷ’ ಎಂದು ಮಾರವಾಡಿ ಜೋಡಿ ಹೇಳಿದ್ದು, ಕೊನೆಗೆ 5.80 ಲಕ್ಷ ರೂಪಾಯಿಗೆ ವ್ಯವಹಾರ ಕುದುರಿತ್ತು. ಬಂಗಾರದ ಗುಂಡು ಅಸಲಿ ಎಂದು ಅರಿತ ಮೆಹಬೂಬ್ ಅಲಿ ಮುಂಡಗೋಡಿಗೆ ತೆರಳಿ ವ್ಯವಹಾರ ಕುದುರಿಸಿದ್ದರು.
ಡಿ 21ರಂದು ಮಧ್ಯಾಹ್ನ ಮುಂಡಗೋಡಿಗೆ ಹೋದ ಮಹೆಬೂಬ್ ಅಲಿ ಯಲ್ಲಾಪುರ ರಸ್ತೆಯ ಮರದ ಅಡಿ ನಿಂತು ಮಾತುಕಥೆ ನಡೆಸಿದ್ದರು. ಮಾರವಾಡಿಗಳು ತಂದಿದ್ದ ಬಿಳಿ ಬಣ್ಣದ ಚೀಲದಲ್ಲಿದ್ದ ಬಂಗಾರವನ್ನು ತಮ್ಮ ಜೇಬಿಗೆ ಇಳಿಸಿ 5.80 ಲಕ್ಷ ರೂ ಹಣ ಕೊಟ್ಟು ಕಳುಹಿಸಿದ್ದರು. ನಂತರ ಬಂದು ನೋಡಿದಾಗ ಅವರು ಪಡೆದ ಬಂಗಾರದ ಗುಂಡುಗಳೆಲ್ಲವೂ ನಕಲಿಯಾಗಿದ್ದವು.
`ತನಗೆ ನ್ಯಾಯ ಕೊಡಿಸಿ’ ಎಂದು ಮೆಹಬೂಬ್ ಅಲಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.




