ಅಂಕೋಲಾ: ಸಾರ್ವಜನಿಕ ರಸ್ತೆ ಬೇಲಿ ಅಳವಡಿಸಿ ಜನರ ಓಡಾಟಕ್ಕೆ ಅಡ್ಡಪಡಿಸಿದ ಇಬ್ಬರ ವಿರುದ್ಧ ಗ್ರಾ ಪಂ ಅಧಿಕಾರಿ ಪೊಲೀಸ್ ದೂರು ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಮಾಡದಂತೆ ಪೊಲೀಸರು ಮನಪರಿವರ್ತನೆ ಮಾಡುವ ಪ್ರಯತ್ನ ನಡೆಸಿದರೂ ಬಗ್ಗದವರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಂಕೋಲಾದ ಖಾರ್ವಿವಾಡದ ತಾರಿ ಬಂದರುವಿನ ಸಾರ್ವಜನಿಕರ ರಸ್ತೆಗೆ ಡಿ 30ರಂದು ಖಾರ್ವಿವಾಡ ಇಬ್ಬೂರಿನ ಅಶೋಕ ಕುಡ್ತಳಕರ ಬೇಲಿ ಹಾಕಿದ್ದರು. ಅದೇ ಊರಿನ ಗಣಪತಿ ಬಾನಾವಳಿಕರ ಸಹ ರಸ್ತೆಗೆ ಅಡ್ಡಲಾಗಿ ಬೇಲಿ ನಿರ್ಮಿಸಿದ್ದರು. ಇದರಿಂದ ಜನ ಓಡಾಟಕ್ಕೆ ಸಮಸ್ಯೆಯಾಗಿದ್ದು, ಸಾರ್ವಜನಿಕ ರಸ್ತೆ ಅತಿಕ್ರಮಣದ ಬಗ್ಗೆ ಗ್ರಾಮ ಪಂಚಾಯತಗೆ ದೂರಿದ್ದರು.
ಬೇಲಿಕೇರಿ ಗ್ರಾ ಪಂ ಪಿಡಿಓ ಪೂರ್ಣಿಮಾ ಗೌಡ ಅವರು ಬೇಲಿ ತೆರವು ಮಾಡುವಂತೆ ಸೂಚಿಸಿದರು. ರಸ್ತೆಗೆ ಅಡ್ಡಲಾಗಿ ಬೇಲಿ ಹಾಕಿದವರಿಗೆ ಮನವೊಲೈಸುವ ಪ್ರಯತ್ನ ನಡೆಸಿದರು. ಈ ನಡುವೆ ಗಣಪತಿ ಭಾನಾವಳಿಕರ್ ಜ 3ರಂದು ರಸ್ತೆಗೆ ಅಡ್ಡಲಾಗಿ ತಮ್ಮ ಜೀಪ್ ನಿಲ್ಲಿಸಿ ಓಡಾಟಕ್ಕೆ ಇನ್ನಷ್ಟು ಸಮಸ್ಯೆ ಮಾಡಿದರು. ಆಗ ಪಿಡಿಓ ಪೂರ್ಣಿಮಾ ಗೌಡ ಅವರು ಪೊಲೀಸರ ಮೊರೆ ಹೋದರು.
ಪೊಲೀಸರು ಸಹ ರಸ್ತೆಗೆ ಅಡ್ಡಲಾಗಿ ಬೇಲಿ ನಿರ್ಮಿಸಿದವರಿಗೆ ಬುದ್ದಿ ಹೇಳಿದರು. ಅದಾಗಿಯೂ ಸಮಸ್ಯೆ ಬಗೆಹರಿಯದ ಕಾರಣ ಪೂರ್ಣಿಮಾ ಗೌಡ ಅವರು ನೀಡಿದ ದೂರು ಸ್ವೀಕರಿಸಿ, ಪ್ರಕರಣ ದಾಖಲಿಸಿದರು.




