ಕಾರವಾರ: ದೋಬಿಗಾಟ ರಸ್ತೆಯಿಂದ ಬ್ರಹ್ಮದೇವರ ದೇವಾಲಯಕ್ಕೆ ತೆರಳುವ ಮಾರ್ಗದ ಕೋಣೆವಾಡದಲ್ಲಿ ಅಪಾರ್ಟಮೆಂಟ್’ವೊoದು ನಿರ್ಮಾಣವಾಗುತ್ತಿದ್ದು, ಇದಕ್ಕೆ ರಸ್ತೆಯೇ ಇಲ್ಲ!
ರಸ್ತೆ ಮಾತ್ರವಲ್ಲ.. ಈ ಅಪಾರ್ಟಮೆಂಟಿಗೆ ಚರಂಡಿ, ಯುಜಿಡಿ ಸಂಪರ್ಕ ವ್ಯವಸ್ಥೆ ಇಲ್ಲ. ರೇರಾ ಅನುಮೋದನೆ ಪಡೆದಿಲ್ಲ. ಈ ಬಗ್ಗೆ ಮನೋಜಕುಮಾರ ನಾಯ್ಕ ಎಂಬಾತರು ಮಾಹಿತಿ ಹಕ್ಕು ಕಾಯ್ದೆ ಅಡಿ ನಗರಸಭೆಗೆ ಅರ್ಜಿ ಸಲ್ಲಿಸಿದರೂ ದಾಖಲೆಗಳು ದೊರೆಯುತ್ತಿಲ್ಲ!
ಈ ಹಿನ್ನಲೆ `ನಗರಸಭೆ ಹಾಗೂ ಕೆಡಿಎ ಅಧಿಕಾರಿಗಳು ಲಂಚ ಪಡೆದು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ’ ಎಂದು ಮನೋಜಕುಮಾರ ನಾಯ್ಕ ಅವರು ಲೋಕಾಯುಕ್ತರಿಗೆ ದೂರಿದ್ದಾರೆ. `ಖುದ್ದು ಸ್ಥಳ ಪರಿಶೀಲನೆ ನಡೆಸಬೇಕು’ ಎಂದು ಅವರು ಲಿಖಿತವಾಗಿ ತಿಳಿಸಿದ್ದು, ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
`ಆಸಿಯಾ ಡೆವಲಪರ್ಸ’ ಇಲ್ಲಿ ಬಹುಮಹಡಿ ಕಟ್ಟಡವನ್ನು ನಿರ್ಮಿಸುತ್ತಿದೆ. ನಕ್ಷೆಗಳ ಪ್ರಕಾರ ಈ ಕಟ್ಟಡಕ್ಕೆ ತೆರಳಲು 9 ಮೀ ಅಗಲದ ರಸ್ತೆ ತೋರಿಸಲಾಗಿದೆ. ಆದರೆ, ಸ್ಥಳದಲ್ಲಿ 4.5 ಮೀಟರ್ ರಸ್ತೆಯಿದ್ದು, ಅದರಲ್ಲಿ 2.1ಮೀಟರ್ ರಸ್ತೆ ಖಾಸಗಿಯವರ ವಶದಲ್ಲಿದೆ. ಅದು ಸಹ ನಗರಸಭೆಗೆ ಹಸ್ತಾಂತರವಾಗಿಲ್ಲ. ಉಳಿದಂತೆ, ಆಸಿಯಾ ಡೆವಲಪರ್ಸ ಅವರು ಆ ರಸ್ತೆಯನ್ನು ಸಹ ನೊಂದಣಾಧಿಕಾರಿ ಕಚೇರಿ ಮೂಲಕ ನಗರಸಭೆಗೆ ಹಸ್ತಾಂತರಿಸಿಲ್ಲ ಎನ್ನುವ ವಿಷಯದ ಲೋಕಾಯುಕ್ತ ದೂರಿನಲ್ಲಿ ವಿವರಿಸಲಾಗಿದೆ.
`ಕಟ್ಟಡಕ್ಕೆ ತಳಪಾಯ ಹಾಕುವಾಗಲೇ ಈ ಬಗ್ಗೆ ದೂರು ಸಲ್ಲಿಸಲಾಗಿದ್ದು, ಆ ವೇಳೆ ನಗರಸಭೆಯವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ’ ಎಂದು ಮನೋಜಕುಮಾರ ನಾಯ್ಕ ದೂರಿದ್ದಾರೆ.




