ಹಳಿಯಾಳ: `ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಬೊಕ್ಕಸ ಖಾಲಿಯಾಗುತ್ತಿದೆ. ಇದರೊಂದಿಗೆ ಜನಸಾಮಾನ್ಯರ ಮೇಲೆಯೂ ಬೆಲೆ ಏರಿಕೆ ಬಾಣ ಪ್ರಯೋಗ ನಡೆದಿದೆ’ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದ ಅವರು `ಮಹಿಳೆಯರಿಗೆ ಉಚಿತ ಬಸ್ ಕಲ್ಪಿಸಿದ ಸಿದ್ದರಾಮಯ್ಯ ಇದೀಗ ಬಸ್ ದರವನ್ನು ಶೇ 15ರಷ್ಟು ಏರಿಕೆ ಮಾಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಿಸಿರುವುದು ಖಂಡನೀಯ’ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್ ಎಲ್ ಘೋಟ್ನೇಕರ್ ಮಾತನಾಡಿ `ವಿದ್ಯುತ್, ನೀರು, ಮುದ್ರಾಂಕ ಶುಲ್ಕ, ಆಸ್ತಿ ಮಾರ್ಗಸೂಚಿ ದರ, ಇನ್ನಿತರ ಬೆಲೆಗಳು ಏರಿಕೆಯಾಗಿದೆ. ಇದರೊಂದಿಗೆ ಬಸ್ ದರ ಸಹ ಏರಿಸಿ ಜನರಿಗೆ ಅನ್ಯಾಯ ಮಾಡಲಾಗಿದೆ’ ಎಂದು ದೂರಿದರು.
ಬಿಜೆಪಿ ತಾಲೂಕಾ ಅಧ್ಯಕ್ಷ ವಿಠಲ ಸಿದ್ದನ್ನವರ, ಪ್ರಮುಖರಾದ ಸಂತೋಷ ಘಟಕಾಂಬಳೆ, ತಾನಾಜಿ ಪಟ್ರೇಕರ, ಹನುಮಂತ ಚಿನಗಿನಕೊಪ್ಪ, ಚೂಡಪ್ಪ ಬೋಬಾಟಿ, ಜಯಲಕ್ಷ್ಮೀ ಚವ್ಹಾಣ, ಶಕುಂತಲಾ ಜಾಧವ ಇದ್ದರು.




