ಸಿದ್ದಾಪುರ: ಶಿರಸಿ ಮಾರಿಕಾಂಬಾ ದೇವಾಲಯಕ್ಕೆ ತೆರಳಿ ದೇವರ ದರ್ಶನ ಮುಗಿಸಿದ ಭರತ ಗೌಡ ಮನೆಗೆ ಬಂದು ನೇಣು ಹಾಕಿಕೊಂಡಿದ್ದಾರೆ. ಆತನ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ.
ಸಿದ್ದಾಪುರ ಹೆಗ್ನೂರು ಹಲಸಿನಜಡ್ಡಿ ಭರತ ಗೌಡ (20) ಕೃಷಿ ಜೊತೆ ಕೂಲಿ ಕೆಲಸ ಮಾಡಿಕೊಂಡಿದ್ದರು. ಜ 7ರಂದು ಬೆಳಗ್ಗೆ 6 ಗಂಟೆಗೆ ಎದ್ದು ನಾಗಪತಿ ಗೌಡರ ಜೊತೆ ಮಾರಿಕಾಂಬಾ ದೇವಾಲಯಕ್ಕೆ ಹೋಗಿದ್ದರು. ಆ ದಿನ ಭರತ ಗೌಡ ಅವರ ತಂದೆ ರಾಮಚಂದ್ರ ಗೌಡ ಕಾನಸೂರಿಗೆ ಹೋಗಿದ್ದರು. ತಾಯಿ ತವರುಮನೆಗೆ ತೆರಳಿದ್ದರು. ಹೀಗಾಗಿ ಭರತ ಗೌಡ ದೇವಾಲಯದಿಂದ ಮರಳಿದಾಗ ಮನೆಯಲ್ಲಿ ಯಾರೂ ಇರಲಿಲ್ಲ.
ಆ ದಿನ ಮಧ್ಯಾಹ್ನ 3 ಗಂಟೆ ವೇಳೆಗೆ ರಾಮಚಂದ್ರ ಗೌಡ ಅವರು ಮನೆಗೆ ಮರಳಿದರು. ಮನೆ ಒಳಗೆ ಪ್ರವೇಶಿಸುವ ಮುನ್ನ ಭರತ ಗೌಡ ನೇತಾಡುತ್ತಿರುವುದನ್ನು ಅವರು ಕಿಟಕಿಯಿಂದ ಕಂಡರು. ದೊಡ್ಡ ಬೊಬ್ಬೆ ಹಾಕಿ ಮನೆ ಒಳಗೆ ಪ್ರವೇಶಿಸಿದರು. ಅವರ ಬೊಬ್ಬೆ ಕೇಳಿ ಅಕ್ಕ-ಪಕ್ಕದ ಮನೆಯವರು ಬಂದು ಹಗ್ಗ ತುಂಡರಿಸಿದರು. ನೇತಾಡುತ್ತಿದ್ದ ಭರತ ಗೌಡರನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆದರೆ, ಭರತ ಗೌಡ ದಾರಿ ಮದ್ಯೆಯೇ ಸಾವನಪ್ಪಿರುವ ಬಗ್ಗೆ ವೈದ್ಯರು ಘೋಷಿಸಿದರು. `ಸಾವಿನಲ್ಲಿ ಅನುಮಾನವಿಲ್ಲ. ಆದರೆ, ಆತನ ಸಾವಿನ ಕಾರಣ ಗೊತ್ತಾಗಬೇಕು’ ಎಂದು ರಾಮಚಂದ್ರ ಗೌಡ ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.




