ಕುಮಟಾ: ಜನಪರ ಕಾಳಜಿ, ಸೌಮ್ಯ ಸ್ವಭಾವದ ಉಮಾಕಾಂತ ಹೊಸ್ಕಟ್ಟ ಅವರು ಮೀನುಗಾರ ಮುಖಂಡರಾಗಿದ್ದರೂ ಕಾರ್ಮಿಕರಂತೆ ದುಡಿಯುತ್ತಾರೆ. ಸದಾ ಮೀನುಗಾರರ ಪರವಾಗಿ ಚಿಂತಿಸುವ ಅವರಿಗೆ ಮೀನುಗಾರ ಸಮುದಾಯದವರೆಲ್ಲ ಸೇರಿ ತದಡಿ ಮೀನುಗಾರರ ಸಹಕಾರಿ ಸಂಘದ ಚುನಾವಣೆಯಲ್ಲಿ ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಪ್ರಸ್ತುತ ಸಂಘದ ಅಧ್ಯಕ್ಷರೂ ಆಗಿರುವ ಅವರು `ಹೊಸಬರಿಗೂ ಇಲ್ಲಿ ಅವಕಾಶ ಸಿಗಬೇಕು’ ಎಂಬ ನಿಟ್ಟಿನಲ್ಲಿ ಸಹಕಾರಿ ಸಂಘದ ಹುದ್ದೆ ತ್ಯಜಿಸಲು ನಿರ್ಧರಿಸಿದ ಮಾತು ದಟ್ಟವಾಗಿದೆ. ಆದರೆ, ಇದಕ್ಕೆ ಮೀನುಗಾರರೇ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾರವಾರದ ಮಂಗಳೂರಿನವರೆಗಿನ ಮೀನುಗಾರರ ಸಂಪರ್ಕದಲ್ಲಿರುವ ಉಮಾಕಾಂತ ಅವರು ಎಲ್ಲಿ ಯಾರಿಗೆ ಸಮಸ್ಯೆ ಆದರೂ ನೆರವಿಗೆ ಹೋಗುತ್ತಾರೆ. ಕರಾವಳಿ ಮಾತ್ರವಲ್ಲದೇ ಒಳನಾಡು ಮೀನುಗಾರರ ಜೊತೆಯೂ ಅವರು ಸಂಪರ್ಕದಲ್ಲಿದ್ದಾರೆ. ಸ್ಥಳೀಯ ಹಾಗೂ ಹೊರಗಿನ ಮೀನುಗಾರರ ನಡುವೆ ಘರ್ಷಣೆ ಆದಾಗಲೆಲ್ಲ ನೊಂದವರಿಗೆ ನ್ಯಾಯ ದೊರಕಿಸಿದ ನಿದರ್ಶನ ನೂರಾರು. ಉಮಾಕಾಂತ ಹೊಸ್ಕಟ್ಟ ಅವರು ಬಹುತೇಕ ಪ್ರಕರಣಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ಕಾರಣ ಎಲ್ಲರಿಗೂ ಅವರನ್ನು ಕಂಡರೆ ಅಚ್ಚುಮೆಚ್ಚು. ಮೀನುಗಾರರೆಲ್ಲರೂ ಒಂದೇ ಕುಟುಂಬದವರು’ ಎಂದು ಭಾವಿಸಿದ ಅವರು ಎಲ್ಲಿ ಯಾರಿಗೆ ಸಮಸ್ಯೆ ಆದರೂ ಸದಾ ಹಾಜರು.
ಬಾಲ್ಯದಿಂದಲೂ ಬಡತನ ನೋಡಿದ ಅವರಿಗೆ ಬೇರೆಯವರ ಸಮಸ್ಯೆ ಬಹುಬೇಗ ಅರ್ಥವಾಗುತ್ತದೆ. ಸಂಘಟನೆ, ಹೋರಾಟದ ಜೊತೆ ಮಾನವೀಯ ನೆಲೆಯಲ್ಲಿ ಬದುಕುವುದು ಉಮಾಕಾಂತ ಹೊಸಕಟ್ಟಾ ಅವರಿಗೆ ಬಳುವಳಿಯಾಗಿ ಬಂದಿದೆ. ಹೀಗಾಗಿ ಶಿರೂರು ಗುಡ್ಡ ಕುಸಿತ ಅವಧಿಯಲ್ಲಿ ಪ್ರತಿ ಹಂತದಲ್ಲಿಯೂ ಅವರು ರಕ್ಷಣಾ ಚಟವಟಿಕೆಗಳಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮುಳುಗು ತಜ್ಞ ಈಶ್ವರ ಮಲ್ಪೆ ಅವರ ಜೊತೆ ಕೈ ಜೋಡಿಸಿ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ.
ಉಮಾಕಾಂತ ಹೊಸಕಟ್ಟಾ ಅವರು ಈವರೆಗೂ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. `ತಾನು ಒಬ್ಬ ನಾಯಕ’ ಎಂಬ ಅಹಂ ಅವರಿಗಿಲ್ಲ. ಈ ಎಲ್ಲಾ ಗುಣ-ನಡತೆಯನ್ನು ನೋಡಿದ ಮೀನುಗಾರ ಸಮುದಾಯದವರು ಅವರ ಬೆನ್ನಿಗೆ ನಿಂತಿದ್ದಾರೆ. ಮಾದನಗೇರಿಯ ಗೋವಿಂದ ಹರಿಕಂತ್ರ ಅವರು ಉಮೇಶ ಹೊಸಕಟ್ಟಾ ಅವರನ್ನು ಸಹಕಾರಿ ಕ್ಷೇತ್ರಕ್ಕೆ ಪರಿಚಯಿಸಿದರು. ಹೊಸ್ಕಟ್ಟಾ, ಹಳೆಗಜನಿ, ತೋರಿಗಜನಿ, ಮಸಕಲ್ಲ, ಮೂಡಂಗಿ ಗೋಕರ್ಣ, ತದಡಿ, ಬೆಲೆಕಾನ್, ಅಘನಾಶಿನಿ, ಮಾದನಗೇರಿ, ನುಸಿಕೋಟಿ, ಹಿರೇಗುತ್ತಿ ಹಾಗೂ ಮೊರಬ ಸುತ್ತಮುತ್ತಲಿನ ಮೀನುಗಾರರು ಉಮಾಕಾಂತ ಅವರನ್ನು ತದಡಿ ಸೊಸೈಟಿಗೆ ಆಯ್ಕೆ ಮಾಡಿದರು. ಅಲ್ಲಿನ ಜನ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅದರ ಪರಿಣಾಮವಾಗಿ ಉಮಾಕಾಂತ ಅವರು ಅಧ್ಯಕ್ಷರಾಗಿರುವ ತದಡಿ ಮೀನುಗಾರರ ಸಹಕಾರಿ ಸಂಘಕ್ಕೆ ಕಳೆದ ವರ್ಷ ರಾಜ್ಯ ಪ್ರಶಸ್ತಿ ಸಿಕ್ಕಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಮೀನುಗಾರಿಕಾ ಸಚಿವರು ಸಹ ಸಂಘದ ಸಾಧನೆಯನ್ನು ಕೊಂಡಾಡಿದ್ದಾರೆ.
`ಮೀನುಗಾರಿಕಾ ಫೇಡರೇಶನ್ ನಿರ್ದೇಶಕರಾಗಿದ್ದ ಅವಧಿಯಲ್ಲಿಯೂ ಉಮಾಕಾಂತ ಹೊಸ್ಕಟ್ಟ ಅವರು ಉತ್ತಮ ಕೆಲಸ ಮಾಡಿದ್ದಾರೆ. ಕರ್ನಾಟಕ ಕರಾವಳಿ ಕ್ರಿಯಾಸಮಿತಿ ಸದಸ್ಯರಾಗಿಯೂ ಅವರ ಕೊಡುಗೆ ಅಪಾರ’ ಎಂದು ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಅವರ ಸೇವೆ ಸ್ಮರಿಸಿದರು. `ಉಮಾಕಾಂತ ಅವರ ಸೇವೆ ಸಹಕಾರಿ ಸಂಘ, ಮೀನುಗಾರರಿಗೆ ಮಾತ್ರ ಸೀಮಿತವಾಗಿಲ್ಲ. ಸಮಾಜದ ಎಲ್ಲಾ ರಂಗದಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ’ ಎಂದು ಕುಂದಾಪುರದ ನ್ಯಾಯವಾದಿ ಬಿಂದು ಅಭಿಪ್ರಾಯವ್ಯಕ್ತಪಡಿಸಿದರು. `ಮೀನುಗಾರರು ಆಳ ಸಮುದ್ರಕ್ಕೆ ಹೋದಾಗ ಅವಘಡದಿಂದ ಸಾವನಪ್ಪಿದರೆ ಮೊದಲು ಸಾಂತ್ವಾನ ಹೇಳುವವರು ಉಮಾಕಂತಣ್ಣ. ಸಂತ್ರಸ್ತ ಕುಟುಂಬಕ್ಕೆ ವೈಯಕ್ತಿಕ ನೆರವು ನೀಡುವುದರ ಜೊತೆ ಆ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತಾರೆ’ ಎಂದು ಅಘನಾಶಿನಿಯ ಗಣಪತಿ ಅಂಬಿಗ ತಾವು ಕಂಡ ಘಟನಾವಳಿಗಳನ್ನು ಮೆಲಕು ಹಾಕಿದರು.
`ಮೀನುಗಾರಿಕಾ ಇಲಾಖೆ ಅಧಿಕಾರಿಗಳ ಜೊತೆಯೂ ಉತ್ತಮ ಒಡನಾಟ ಹೊಂದಿರುವ ಉಮಾಕಾಂತ ಹೊಸಕಟ್ಟ ಅವರಿಗೆ ಸಾಮಾಜಿಕ ಚಟುವಟಿಕೆಗಳಿಂದ ಎಂದಿಗೂ ನಿವೃತ್ತಿ ಇಲ್ಲ. ಸೊಸೈಟಿಯೇ ಇರಲಿ, ಸಾಮಾಜಿಕ ಬದುಕು-ಹೋರಾಟಗಳೇ ಇರಲಿ. ಅವರು ಎಂದಿಗೂ ನಮ್ಮೊಂದಿಗಿರಬೇಕು’ ಎಂದು ಉಮಾಕಾಂತ ಹೊಸಕಟ್ಟಾ ಅವರ ಬೆಂಬಲಿಗರು ಆಗ್ರಹಪೂರ್ವಕವಾಗಿ ಒತ್ತಾಯಿಸಿದರು.
ಜನವರಿ 25ಕ್ಕೆ ತದಡಿ ಮೀನುಗಾರರ ಸಹಕಾರಿ ಸಂಘದ ಚುನಾವಣೆ ನಡೆಯಲಿದೆ. ಈ ಬಗ್ಗೆ ಉಮಾಕಾಂತ ಹೊಸಕಟ್ಟಾ ಅವರನ್ನು ಪ್ರಶ್ನಿಸಿದಾಗ `ಸಂಘದ ಸಂಸ್ಥಾಪಕರಾಗಿದ್ದ ಹನುಮಂತ ದೇವು ಮೂಡಂಗಿ ಅವರು ತಮಗೆ ಆದರ್ಶ. ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದ ನಾನು 20 ವರ್ಷಗಳ ಕಾಲ ಸೊಸೈಟಿ ಸೇವೆ ಮಾಡಿದ್ದು, ಇದೀಗ ಹೊಸಬರಿಗೆ ಅವಕಾಶ ಕೊಡುವ ಚಿಂತನೆಯಿದೆ. ಅದಾಗಿಯೂ ಸಾಕಷ್ಟು ಒತ್ತಡ ಬರುತ್ತಿದ್ದು, ಈ ಬಗ್ಗೆ ಇನ್ನೂ ಯೋಚಿಸಿಲ್ಲ’ ಎಂದು ಹೇಳಿದರು. ಉಮಾಕಾಂತ ಹೊಸಕಟ್ಟಾ ಅವರು ಕರ್ನಾಟಕ ರಕ್ಷಣಾ ವೇದಿಕೆ (ಜನಧ್ವನಿ) ಜಿಲ್ಲಾಧ್ಯಕ್ಷರೂ ಆಗಿದ್ದಾರೆ.




