ಕಾರವಾರ: ಕೋಡಿಬೀರ ದೇವಾಲಯದಲ್ಲಿ ಜಾತಿ ಸಭೆಗೆ ಹಾಜರಾಗಿದ್ದ ದಿಗಂಬರ ಹರಿಕಂತ್ರ ಅವರ ಮೇಲೆ ನಾಲ್ವರು ದಬ್ಬಾಳಿಕೆ ನಡೆಸಿದ್ದಾರೆ. ದೌರ್ಜನ್ಯಕ್ಕೆ ನಲುಗಿದ ದಿಗಂಬರ ಹರಿಕಂತ್ರ ಆಸ್ಪತ್ರೆ ಸೇರಿದ್ದಾರೆ.
ಗುನಗಿವಾಡದ ಗಿಂಡಿ ದೇವಸ್ಥಾನದ ಬಳಿ ವಾಸವಾಗಿರುವ ದಿಗಂಬರ ಹರಿಕಂತ್ರ ಅವರಿಗೆ ಮೀನುಗಾರಿಕೆ ಮುಖ್ಯ ಕಸುಬು. ಅವರು ಜನವರಿ 5ರ ಸಂಜೆ 7.30ಕ್ಕೆ ಕೋಡಿಬೀರ ದೇವಾಲಯದ ಸಭಾ ಭವನಕ್ಕೆ ಹೋಗಿದ್ದರು. ಅಲ್ಲಿದ್ದ ಜಾತಿ ಸಭೆ ಮುಗಿಸಿ ಸ್ನೇಹಿತರ ಜೊತೆ ಮಾತನಾಡುತ್ತಿದ್ದರು.
ಆಗ ಸಾಯಿನಾಥ ಹರಿಕಂತ್ರ, ಆರ್ಯ ಮಾಜಾಳಿಕರ, ನೀಲೇಶ ಹರಿಕಂತ್ರ ಹಾಗೂ ದರ್ಶನ್ ಹರಿಕಂತ್ರ ಎಂಬಾತರು ಅಲ್ಲಿಗೆ ಬಂದರು. `ಈ ಮೀಟಿಂಗಿನಲ್ಲಿ ಏನು ನಡೆದಿದೆ ಎಂದು ಗೊತ್ತಿದೆ’ ಎಂದು ಮಾತು ಶುರು ಮಾಡಿದರು. ಕೊನೆಗೆ ದಿಗಂಬರ ಹರಿಕಂತ್ರ ಅವರ ಕಪಾಳಕ್ಕೆ ಬಾರಿಸಿದರು. ದಿಗಂಬರ ಹರಿಕಂತ್ರ ಅವರನ್ನು ದೂಡಿ ನೆಲಕ್ಕೆ ಬೀಳಿಸಿದರು.
ಆಸ್ಪತ್ರೆ ಸೇರಿದ ದಿಗಂಬರ ಹರಿಕಂತ್ರ ಅವರು ಜನವರಿ 6ರಂದು ಪೊಲೀಸ್ ದೂರು ನೀಡಿದರು. ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ರಾಜಿ-ಸಂದಾನದ ಮೂಲಕ ಪ್ರಕರಣ ಬಗೆಹರಿಸುವ ಪ್ರಯತ್ನ ನಡೆಸಿದ್ದು, ಎದುರುದಾರರನ್ನು ಕರೆಯಿಸಿ ಮುಚ್ಚಳಿಕೆ ಬರೆಯಿಸಿಕೊಳ್ಳುವ ಚಿಂತನೆಯಲ್ಲಿದ್ದರು. ಆದರೆ, ದಿಗಂಬರ ಹರಿಕಂತ್ರ ಅವರು ನ್ಯಾಯಾಲಯಕ್ಕೆ ತೆರಳಿ ತಮ್ಮ ಮೇಲೆ ದಾಳಿ ನಡೆಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರೆದಿದೆ.




