ಸಿದ್ದಾಪುರ: ಎರಡು ತಿಂಗಳಿನಿ0ದ ಎದೆನೋವಿನ ಮಾತ್ರೆ ಸೇವಿಸುತ್ತಿದ್ದ ಈಶ್ವರ ಹಸ್ಲರ್ ಐದು ದಿನ ಮಾತ್ರೆ ತಿನ್ನಲು ಮರೆತಿದ್ದು, ಗುರುವಾರ ಆರೋಗ್ಯದಲ್ಲಿನ ಏರುಪೇರಿನಿಂದ ಅವರು ಸಾವನಪ್ಪಿದರು.
ಸಿದ್ದಾಪುರ ಕ್ಯಾದಗಿ ಹೂವಿನಮನೆಯ ಈಶ್ವರ ಹಸ್ಲರ್ (35) ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಎರಡು ತಿಂಗಳ ಹಿಂದೆ ಎದೆನೋವಿನ ಕಾರಣ ಅವರು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ಕೊಟ್ಟ ಮಾತ್ರೆಯನ್ನು ಅವರು ನಿತ್ಯವೂ ಸೇವಿಸುತ್ತಿದ್ದರು. ಅದಾದ ನಂತರ ಅವರು ಸಹಜವಾಗಿದ್ದರು.
ವಾರದ ಹಿಂದೆ ಅವರು ಮಾತ್ರೆ ತಿನ್ನುವುದನ್ನು ನಿಲ್ಲಿಸಿದರು. ಐದು ದಿನಗಳ ಕಾಲ ಅವರು ಒಂದು ಗುಳುಗೆಯನ್ನು ಸಹ ಸೇವಿಸಲಿಲ್ಲ. ಜನವರಿ 8ರಂದು ತಲೆ ಹಾಗೂ ಮೈ-ಕೈ ನೋವು ಕಾಣಿಸಿಕೊಂಡಿದ್ದರಿoದ ಮತ್ತೆ ಆಸ್ಪತ್ರೆ ಸೇರಿದರು. ಆಗ ಅಲ್ಲಿನ ವೈದ್ಯರು `ಉಸಿರಾಟದ ತೊಂದರೆ ಹೆಚ್ಚಾಗಿದ್ದು, ಕೂಡಲೇ ಇಸಿಜಿ ಮಾಡಬೇಕು’ ಎಂದು ಹೇಳಿದರು.
ಈ ಹಿನ್ನಲೆ ಇಸಿಜಿ ಮಾಡಿಸುವುದಕ್ಕಾಗಿ ಈಶ್ವರ ಅವರನ್ನು ಅವರ ತಾಯಿ ರಾಮಿ ಹಸ್ಲರ್ ಜ 9ರಂದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ಈಶ್ವರ್ ಈಗಾಗಲೇ ಸಾವನಪ್ಪಿದ ಬಗ್ಗೆ ಘೋಷಿಸಿದರು.




