ವ್ಯಾಪಕ ಗಾಳಿ-ಮಳೆ ಪರಿಣಾಮ ಮುರಿದು ಬಿದ್ದ ವಿದ್ಯುತ್ ಕಂಬಗಳನ್ನು ಹೆಸ್ಕಾಂ ಸಿಬ್ಬಂದಿ ಹರಸಾಹಸದಿಂದ ಸರಿಪಡಿಸಿದ್ದಾರೆ. ಮಂಗಳವಾರ ಬೆಳಗ್ಗೆ 8ಗಂಟೆಯಿoದ ಸಂಜೆ 5 ಗಂಟೆಯವರೆಗೂ ಕುಮಟಾದ ಮಾದನಗೇರಿ ಗಜನಿ ಪ್ರದೇಶದಲ್ಲಿ ಗುದ್ದಾಡಿದ ವಿದ್ಯುತ್ ನೌಕರರು 6 ಕಂಬಗಳನ್ನು ನೆಟ್ಟು ವಿದ್ಯುತ್ ತಂತಿ ಜಗ್ಗಿದರು.
ಜುಲೈ-ಅಗಷ್ಟ ವೇಳೆ ಸುರಿದ ಭಾರೀ ಪ್ರಮಾಣದ ಮಳೆಯಿಂದಾಗಿ ಕುಮಟಾದ ಮಾದನಗೇರಿ ಗಜನಿ ಪ್ರದೇಶದಲ್ಲಿನ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದವು. ಆ ಅವಧಿಯಲ್ಲಿ ಕುತ್ತಿಗೆವರೆಗಿನ ರಾಡಿ ನೀರಿನಲ್ಲಿ ಮುಳುಗಿ ಹೆಸ್ಕಾಂ ಸಿಬ್ಬಂದಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕೊಟ್ಟಿದ್ದರು. ಆಗ ನಿಲ್ಲಿಸಿದ ವಿದ್ಯುತ್ ಕಂಬಗಳ ಅಂಕು-ಡೊoಕಾಗಿದ್ದು ಕಾಡು ಮರಗಳು ಮುರಿದು ಬೀಳುತ್ತಿದ್ದರಿಂದ ಪದೇ ಪದೇ ವಿದ್ಯುತ್ ಸಂಪರ್ಕ ಕಡಿತವಾಗುತ್ತಿತ್ತು.
ಗಜನಿ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಅಪರೂಪದ ಕಾಂಡ್ಲಾ ಗಿಡಗಳಿದ್ದು, ಅದಕ್ಕೆ ಹಾನಿಯಾಗದಂತೆ ವಿದ್ಯುತ್ ಕಂಬ ಸಾಗಾಟವೂ ಸವಾಲಾಗಿತ್ತು. ಪ್ರಸ್ತುತ ಮಂಗಳವಾರ ಗಜನಿ ಭೂಮಿಯಲ್ಲಿನ ನೀರಿನ ಏರಿಳಿತ ಗಮನಿಸಿದ ಹೆಸ್ಕಾಂ ಅಭಿಯಂತರ ರಾಜೇಶ ಮಡಿವಾಳ ತಮ್ಮ ಸಿಬ್ಬಂದಿ ಜೊತೆ ಕಾರ್ಯಾಚರಣೆಗಿಳಿದರು. 30ಕ್ಕೂ ಅಧಿಕ ನೌಕರರು ಸುಮಾರು ಅರ್ದ ಕಿಮೀ ದೂರದವರೆಗೆ ವಿದ್ಯುತ್ ಕಂಬಗಳನ್ನು ಹೆಗಲ ಮೇಲೆ ಹೊತ್ತೊಯ್ದರು. ಅಡ್ಡಬಂದ ರೈಲ್ವೆ ಹಳಿ, ಹೆಗಲ ಮೇಲಿನ ಬಾರ, ಕಾಲಿಗೆ ಚುಚ್ಚುವ ಮುಳ್ಳು ಹಾಗೂ ಮೈಗೆ ಅಂಟುವ ರಾಡಿಯನ್ನು ಲೆಕ್ಕಿಸದೇ ಹೆಸ್ಕಾಂ ನೌಕರರು ಗಜನಿ ಭೂಮಿಯಲ್ಲಿ ಹೆಜ್ಜೆ ಹಾಕಿದರು.
ವಾಹನ ಸಂಚರಿಸದ ಮಾರ್ಗಗಳಲ್ಲಿ ಕಾಲ್ನಡಿಗೆಯಲ್ಲಿ ಕಂಬ ಒಯ್ದು ಅದನ್ನು ಅಲ್ಲಿ ನಾಟಿ ಮಾಡಿದರು. ಅದರ ಪರಿಣಾಮ, ಗೋಕರ್ಣದಿಂದ ಬರ್ಗಿ ಮಾರ್ಗದ ವಿದ್ಯುತ್ ಸಮಸ್ಯೆಗಳಿಗೆ ಸದ್ಯ ಪರಿಹಾರದ ಭರವಸೆ ಸಿಕ್ಕಿದೆ. ಮಾದನಗೇರಿ, ಹಿರೆಗುತ್ತಿ ಇನ್ನಿತರ ಭಾಗದ ಹೆಸ್ಕಾಂ ಗ್ರಾಹಕರಿಗೆ ಸಹ ಈ ಕೆಲಸದಿಂದ ಅನುಕೂಲವಾಗಿದೆ. ಶಾಖಾಧಿಕಾರಿ ಗೋಪಿನಾಥ ರೆಡ್ಡಿ, ಸಿಬ್ಬಂದಿ ವೆಂಕಟೇಶ ನಾಯ್ಕ, ವಿನಾಯಕ ನಾಯ್ಕ, ಮುರುಕುಂಡೇಶ್ವರ ಎಲೆಕ್ಟಿಕಲ್ ಸಿಬ್ಬಂದಿ ಈ ಸಾಹಸದಲ್ಲಿ ಭಾಗಿಯಾಗಿದ್ದರು.
ಇನ್ನೂ ಈ ಹಿಂದೆ ನೆಡಲಾಗಿದ್ದ ತಾತ್ಕಾಲಿಕ ವಿದ್ಯುತ್ ಕಂಬದ ಮೇಲಿದ್ದ ತಂತಿಗಳನ್ನು ತಪ್ಪಿಸಿ, ಮಂಗಳವಾರ ಹುಗಿದ ಶಾಶ್ವತ ಕಂಬಕ್ಕೆ ತಂತಿ ಜೋಡಿಸಿದರು. ತಾತ್ಕಾಲಿಕ ಕಂಬಗಳು ತುರ್ತು ಸನ್ನಿವೇಶದಲ್ಲಿ ಅಗತ್ಯವಿರುವ ಕಾರಣ ಅದನ್ನು ತೆರವುಗೊಳಿಸದೇ ಹಾಗೇ ಬಿಡಲಾಗಿದೆ.




