ರಾಜ್ಯದ ಹಲವು ಅನುದಾನಿತ ಶಾಲೆಗಳಲ್ಲಿ ಶ್ರಮಿಸುತ್ತಿರುವ ಅತಿಥಿ ಶಿಕ್ಷಕರ ಸಮಸ್ಯೆ ಒಂದೆರಡಲ್ಲ. 8-10 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದವರಿಗೂ ನೇಮಕಾತಿ ಖಾಯಂ ಆಗಿಲ್ಲ. ಅತಿಥಿ ಶಿಕ್ಷಕರಿಗೆ ಸಮಯಕ್ಕೆ ಸರಿಯಾಗಿ ಸಂಬಳವೂ ಬರುತ್ತಿಲ್ಲ. ಸರ್ಕಾರವೇ ಸೂಚಿಸಿದ ಕನಿಷ್ಟ ವೇತನ, ಸೇವಾ ಭದ್ರತೆಯ ಸೌಲಭ್ಯಗಳು ಸಿಗುತ್ತಿಲ್ಲ!
ಶಿಕ್ಷಕರು ಅನುಭವಿಸುತ್ತಿರುವ ಈ ಎಲ್ಲಾ ಸಮಸ್ಯೆಗಳಿಂದ ಶಾಲೆಗಳು ಸಂಕಷ್ಟಕ್ಕೀಡಾಗಿವೆ. ಮಕ್ಕಳ ವಿದ್ಯಾಬ್ಯಾಸದ ಮೇಲೆಯೂ ಇವು ಪರಿಣಾಮ ಬೀರಲಿದೆ. ಹೀಗಾಗಿ ಸಮಸ್ಯೆ ಬಗೆಹರಿಸುವಂತೆ ಕೋರಿ ಶಿಕ್ಷಕರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಗುರುವಾರ ಸಹ ಸಮಸ್ಯೆ ಎದುರಿಸುತ್ತಿರುವ ಶಿಕ್ಷಕರೆಲ್ಲರೂ ಸೇರಿ ಸ್ವಂತ ವೆಚ್ಚದಲ್ಲಿ ಬೆಂಗಳೂರು ತಲುಪಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದರು. `ಅನೇಕ ಶಿಕ್ಷಕರು ಅತ್ಯಂತ ಕಡಿಮೆ ಸಂಬಳಪಡೆದು ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ಖಾಯಂ ನೇಮಕಾತಿ ಕನಸು ಕಂಡು ಉಚಿತವಾಗಿ ದುಡಿಯುತ್ತಿದ್ದಾರೆ’ ಎಂಬ ವಿಷಯವನ್ನು ಸಚಿವ ಮಧು ಬಂಗಾರಪ್ಪ ಅವರ ಮುಂದಿಟ್ಟರು.
`ವಿವಿಧ ತಾಲೂಕುಗಳ ಅನುದಾನಿತ ಶಾಲೆಗಳಲ್ಲಿ 10 ವರ್ಷದಿಂದ ದುಡಿಯುತ್ತಿರುವ ಶಿಕ್ಷಕರಿದ್ದಾರೆ. ಅವರಿಗೆ ಶಿಕ್ಷಣ ಸಂಸ್ಥೆಗಳಿ0ದ ವೇತನವಾಗುತ್ತಿಲ್ಲ. ಸರ್ಕಾರದಿಂದಲೂ ಯಾವುದೇ ಸೌಲಭ್ಯ ಸಿಗುತ್ತಿಲ್ಲ’ ಎಂದು ಶಿಕ್ಷಕರು ಅಳಲು ತೋಡಿಕೊಂಡರು. ಅನುದಾನರಹಿತ ಶಿಕ್ಷಕರ ಸಮಸ್ಯೆಗಳ ಬಗ್ಗೆಯೂ ವಿವರಿಸಿದರು.
`2016ರಿಂದ 2020ನೇ ಸಾಲಿನವರೆಗೆ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ ಆದೇಶ ಹೊರಡಿಸಲಾಗಿದೆ. ಆದರೆ, ಈವರೆಗೂ ಅದಕ್ಕೆ ಸಂಬoಧಿಸಿದ ಯಾವುದೇ ಪ್ರಕ್ರಿಯೆ ಶುರುವಾಗಿಲ್ಲ. ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸುವ ಜೊತೆ ವಯೋಮಿತಿ ಮೀರುತ್ತಿರುವ ಶಿಕ್ಷಕರಿಗೆ ಕೋವಿಡ್ ಕಾರಣ ವಿನಾಯತಿ ನೀಡಿ ಆದೇಶ ಹೊರಡಿಸಬೇಕು’ ಎಂಬ ಬೇಡಿಕೆ ಮುಂದಿಟ್ಟರು.
ಯಲ್ಲಾಪುರದ ಅನುದಾನರಹಿತ ಶಾಲಾ ಶಿಕ್ಷಕರಾದ ಹೋಲಿ ರೋಜರಿ ಪ್ರೌಢಶಾಲೆಯ ನೆಲ್ಸನ್ ಗೊನ್ಸಾಲ್ವಿಸ್ , ಹೊನ್ನಾವರ ತಾಲೂಕಿನ ಗುಂಡಿಬಾಳದ ಆರೋಗ್ಯ ಮಾತಾ ಪ್ರೌಢಶಾಲೆಯ ಶಿಕ್ಷಕ ಜೈರಾಜ್ ಜೈನ್ ಇನ್ನಿತರರು ಭಾಗವಹಿಸಿದ್ದರು. ಸಂಘಟನೆ ಪ್ರಮುಖರಾದ ಬಳ್ಳಾರಿ ತಿಪ್ಪೇಸ್ವಾಮಿ, ಚಳ್ಳಕೆರೆ ಸಂತೋಷ್, ಬಾಗಲಕೋಟೆಯ ಸತೀಶ್, ಚಿತ್ರದುರ್ಗದ ಮಹಿಳಾ ಶಿಕ್ಷಕಿರಾದ ಶ್ವೇತಾ, ರೇಣುಕಾ ರಜಿನಿ ಹಾಗೂ ಹಾಸನ ಜಿಲ್ಲೆಯ ಪುರುಷೋತ್ತಮ್, ಓಂಕಾರ ರೆಡ್ಡಿ, ಕೋಲಾರದ ಗಣೇಶ್, ಬಿಜಾಪುರ ಸಿದ್ದರಾಮ ಬಿರಾದಾರ, ರಾಜೇಶ್, ಚಿಕ್ಕಮಗಳೂರು ಜಿಲ್ಲೆಯ ರಾಜೇಶ್, ದೊಡ್ಡ ರಂಗಪ್ಪ ಮತ್ತು ನೇತಾಜಿ ಪ್ರಸನ್ನ ಅವರು ಸಮಸ್ಯೆ ಬಗ್ಗೆ ವಿವರಿಸಿದರು.





