ದಾರಿ ಸಮಸ್ಯೆ ಬಗೆಹರಿಸಲು ಬಂದ ಸರ್ಕಾರಿ ಅಧಿಕಾರಿ-ಜನಪ್ರತಿನಿಧಿಗಳ ಮುಂದೆಯೇ ಚಂದ್ರಕಾoತ ಗಾಂವ್ಕರ ಎಂಬಾತ ಚಪ್ಪಲಿ ತೋರಿಸಿದ್ದರಿಂದ ಸಿಟ್ಟಾದ ವಿನೋದ ಗಾಂವ್ಕರ್ ಎಂಬಾತರು ನ್ಯಾಯಾಲಯದ ಮೊರೆ ಹೋಗಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಕಾರವಾರದ ಸಿದ್ದರ ಬಳಿಯ ಬಳೆವಾಡದಲ್ಲಿ ವಿನೋದ ಗಾಂವ್ಕರ (69) ಅವರು ಖಾಸಗಿ ಕಂಪನಿಯ ನಿವೃತ್ತ ನೌಕರರಾಗಿದ್ದಾರೆ. ಪೂಣಾದಲ್ಲಿ ಅವರು ವಾಸವಾಗಿದ್ದಾರೆ. ಸಿದ್ದರ ಬಳೆವಾಡದ ಸರ್ವೇ ನಂ 2ರಲ್ಲಿ 19 ಗುಂಟೆ ಭೂಮಿಯಿದ್ದು, ಅದಕ್ಕೆ ತೆರಳಲು ರಸ್ತೆ ಇಲ್ಲದ ಕಾರಣ ಅವರು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದರು. ತಹಶೀಲ್ದಾರರು ಹಾಗೂ ಗ್ರಾಮ ಪಂಚಾಯತಕ್ಕೆ ಸಹ ಈ ಬಗ್ಗೆ ಅವರು ವಿವರಿಸಿದ್ದರು.
ಅದರ ಪ್ರಕಾರ, ಫೆಬ್ರವರಿ 4ರ ಸಂಜೆ ತಹಶೀಲ್ದಾರರ ಜೊತೆ ಕಂದಾಯ ಅಧಿಕಾರಿಗಳು ಜಾಗ ಪರಿಶೀಲನೆಗಾಗಿ ಸ್ಥಳಕ್ಕೆ ಬಂದಿದ್ದರು. ವೈಲವಾಡ ಗ್ರಾ ಪಂ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸಹ ಸ್ಥಳದಲ್ಲಿದ್ದರು. ಅವರ ಬಳಿ ವಿನೋದ ಗಾಂವ್ಕರ್ ಅವರು ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದು, ದಾರಿ ಸಮಸ್ಯೆ ಬಗೆಹರಿಸುವಂತೆ ವಿನಂತಿಸುತ್ತಿದ್ದರು.
ಆಗ, ಅಲ್ಲಿಗೆ ಬಂದ ಚಂದ್ರಕಾoತ ಗಾಂವ್ಕರ ಎಂಬಾತರು ವಿನೋದ ಗಾಂವ್ಕರ್ ಅವರನ್ನು ನಿಂದಿಸಿದರು. ಅನಗತ್ಯವಾಗಿ ಬೈದರು. ಅಲ್ಲಿದ್ದವರ ಎದುರೇ ಚಪ್ಪಲಿ ತೋರಿಸಿ ವಿನೋದ ಗಾಂವ್ಕರ್ ಅವರಿಗೆ ಹೊಡೆಯಲು ಬಂದರು. ಇದರಿಂದ ಬೇಸತ್ತ ವಿನೋದ ಗಾಂವ್ಕರ್ ಅವರು ಮರುದಿನ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ಅಳಲು ತೋಡಿಕೊಂಡರು. ಅರ್ಜಿ ಸ್ವೀಕರಿಸಿದ ಪೊಲೀಸರು ವಿನೋದ ಗಾಂವ್ಕರ್ ಅವರನ್ನು ನ್ಯಾಯಾಲಯಕ್ಕೆ ಕಳುಹಿಸಿಕೊಟ್ಟರು.
ತಮಗಾದ ಅವಮಾನದ ಬಗ್ಗೆ ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡ ವಿನೋದ ಗಾಂವ್ಕರ್ ಅವರು ನ್ಯಾಯಾಲಯದ ಅನುಮತಿಪಡೆದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಪೊಲೀಸರು ಇದೀಗ ಚಂದ್ರಕಾoತ ಗಾಂವ್ಕರ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.




