`ಕೈಗಾ ಅಣು ವಿದ್ಯುತ್ ನಿಗಮ ಹಾಗೂ ಭಾರತೀಯ ನೌಕಾನೆಲೆಯ ಗುತ್ತಿಗೆ ಕಂಪನಿಗಳು ಶೇ 70ರಷ್ಟು ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ನೀಡಬೇಕು’ ಎಂದು ಕಾರವಾರ ಅಂಕೋಲಾ ಕ್ಷೇತ್ರ ಶಾಸಕ ಸತೀಶ ಸೈಲ್ ಹೇಳಿದ್ದಾರೆ. ಮಂಗಳವಾರ ಖಾಸಗಿ ಕಂಪನಿ ಅಧಿಕಾರಿಗಳ ಸಭೆ ನಡೆಸಿದ ಅವರು ಹೊರರಾಜ್ಯದ ಕಾರ್ಮಿಕರು ಹೆಚ್ಚಿರುವ ಬಗ್ಗೆ ಆಕ್ಷೇಪಿಸಿದರು.
`ನೌಕಾನೆಲೆ ಹಾಗೂ ಕೈಗಾ ಅಣು ವಿದ್ಯುತ್ ಘಟಕ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿದೆ. ಇಲ್ಲಿ ವಿವಿಧ ಕಾಮಗಾರಿಗಳನ್ನು ನಿರ್ವಹಿಸುವ ಹಲವು ಗುತ್ತಿಗೆ ಕಂಪನಿಗಳಿವೆ. ಆ ಕಂಪನಿಗಳಲ್ಲಿ ಹೊರ ರಾಜ್ಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿರುವುದರಿ0ದ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲ. ಇಲ್ಲಿನ ಜನ ಉದ್ಯೋಗ ಅರೆಸಿ ಗೋವಾ, ಮುಂಬೈ ಹಾಗೂ ಮಂಗಳೂರು ಕಡೆ ಹೋಗುತ್ತಿದ್ದಾರೆ’ ಎಂದವರು ಕಂಪನಿ ಅಧಿಕಾರಿಗಳಿಗೆ ವಿವರಿಸಿದರು. `ಇಲ್ಲಿನ ಯೋಜನೆಗಳಿಗೆ ಸ್ಥಳೀಯರು ತಮ್ಮ ಜಮೀನು, ಮನೆಗಳನ್ನು ತ್ಯಾಗ ಮಾಡಿದ್ದಾರೆ. ಆದ್ದರಿಂದ ಇಲ್ಲಿನ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಲ್ಲಿ ಶೇ 70 ರಷ್ಟು ಸ್ಥಳೀಯರು ಹಾಗೂ ಶೇ 30 ರಷ್ಟು ಹೊರಗಿನವರನ್ನು ತೆಗೆದುಕೊಳ್ಳಬೇಕು’ ಎಂದು ತಾಕೀತು ಮಾಡಿದರು. `ಈ ಶೇ 70ರಷ್ಟು ಕಾರ್ಮಿಕರಲ್ಲಿ ಯೋಜನಾ ಸ್ಥಳದ 5 ಕಿಮೀ ವ್ಯಾಪ್ತಿಯೊಳಗೆ ವಾಸಿಸುವ ಶೇ 50ರಷ್ಟು ಕಾರ್ಮಿಕರಿರಬೇಕು. ಎಲ್ಲಾ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು’ ಎಂದು ಗುತ್ತಿಗೆ ಕಂಪನಿಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
`ಕೈಗಾ ಹಾಗೂ ಸೀಬರ್ಡ್ನಲ್ಲಿ ಕಾರ್ಮಿಕರ ಅಗತ್ಯತೆ ಪೂರೈಸಲು ಪ್ರತೀ ಗ್ರಾಮ ಪಂಚಾಯಿತಿಯಲ್ಲಿರುವ ನಿರುದ್ಯೋಗಿಗಳ ಪಟ್ಟಿಯನ್ನು ಪಡೆಯಬೇಕು. ಇಂಜಿನಿಯರಿAಗ್, ಪದವಿ, ಐಟಿಐ/ಡಿಪ್ಲೊಮಾ, ಎಸ್ಎಸ್ಎಲ್ಸಿ ಉತ್ತೀರ್ಣ ಮತ್ತು ಅನುತ್ತೀರ್ಣ ವಿದ್ಯಾರ್ಹತೆಯ ವಿವರಗಳೊಂದಿಗೆ ತಾಲೂಕು ಪಂಚಾಯತ್ ಮೂಲಕ ಮಾಹಿತಿ ಪಡೆಯಬೇಕು. ಈ ಪಟ್ಟಿಯನ್ನು ತಹಶೀಲ್ದಾರರು ಹಾಗೂ ಕಾರ್ಮಿಕ ಅಧಿಕಾರಿಗಳು ಪ್ರತಿ ಕಂಪನಿಗೆ ಕಳಿಸಬೇಕು. ಕಂಪನಿಯು ಅಗತ್ಯಕ್ಕೆ ತಕ್ಕಂತೆ ಹಾಗೂ ಅಹರ್ತೆಗೆ ಅನುಗುಣವಾಗಿ ಈ ಪಟ್ಟಿಯಲ್ಲಿರುವವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು. ಹೊಸ ಕಂಪನಿಗಳು ಕೂಡ ಈ ಮಾಹಿತಿಯನ್ನು ಬಳಸಿಕೊಳ್ಳಬೇಕು. ಅಲ್ಲದೇ ಕಾರ್ಮಿಕ ಇಲಾಖೆಯ ನಿಯಮದಂತೆ ಕೇಂದ್ರ ಸರ್ಕಾರದ ಕನಿಷ್ಠ ವೇತನವನ್ನು ಕಾರ್ಮಿಕರಿಗೆ ಕಡ್ಡಾಯವಾಗಿ ನೀಡಬೇಕು’ ಎಂದು ಹೇಳಿದರು.
`ಸೀಬರ್ಡ್ ಹಾಗೂ ಕೈಗಾ ನಿಷೇಧಿತ ಜಾಗವಾದ ಕಾರಣ ಸ್ಥಳೀಯರ ಬಗ್ಗೆ ಪೊಲೀಸ್ ಪರಿಶೀಲನೆ ನಂತರ ಉದ್ಯೋಗಕ್ಕೆ ತೆಗೆದುಕೊಳ್ಳುವುದರಿಂದ ಯಾವುದೇ ಸಮಸ್ಯೆಯೂ ಆಗುವುದಿಲ್ಲ. ಕಂಪನಿಗಳಲ್ಲಿ ಸ್ಥಳೀಯರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ದೂರುಗಳಿದ್ದರೆ 3 ನೋಟಿಸ್ ನೀಡಿ ಅವರನ್ನು ಕೆಲಸದಿಂದ ತೆಗೆಯಲು ಅಭ್ಯಂತರವಿಲ್ಲ’ ಎಂದರು. `ಕಾರ್ಮಿಕರ ಸಮಸ್ಯೆ ಮತ್ತು ಅಹವಾಲುಗಳನ್ನು ಆಲಿಸಿ ಅವುಗಳಿಗೆ ಸೂಕ್ತ ಪರಿಹಾರ ಒದಗಿಸಲು ರಾಜ್ಯದ ಕಾರ್ಮಿಕ ಸಚಿವರನ್ನು ಕಾರವಾರಕ್ಕೆ ಆಹ್ವಾನಿಸಿ ಅವರ ಸಮ್ಮುಖದಲ್ಲಿ ಸಭೆ ನಡೆಸುವುದಾಗಿ ಘೋಷಿಸಿದರು.
ಈ ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ, ತಹಶೀಲ್ದಾರ್ ನಿಶ್ಚಲ ನರೋನಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಏಗನಗೌಡರ್, ಜಿಲ್ಲಾ ಉದ್ಯೋಗಾಧಿಕಾರಿ ವಿನೋದ ನಾಯ್ಕ ಹಾಗೂ ಕೈಗಾ ಮತ್ತು ಸೀಬರ್ಡ್ನಲ್ಲಿನ ವಿವಿಧ ಗುತ್ತಿಗೆ ಕಂಪನಿಗಳ ಅಧಿಕಾರಿಗಳು ಇದ್ದರು.




