ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಶಿವಮೊಗ್ಗದ ಆಸ್ಪತ್ರೆಯೊಂದು ಚಿಕಿತ್ಸೆ ನೀಡಲು ನಿರಾಕರಿಸಿದೆ. ಪರಿಣಾಮ ಸಿದ್ದಾಪುರದ ಹನುಮಂತ ನಾಯ್ಕ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.
ಸಿದ್ದಾಪುರ ತಾಲೂಕಿನ ನಜ್ಜೂರು ಹಸುವಂತೆಯ ಹನುಮಂತ ನಾಯ್ಕ (60) ಅವರು ಫೆ 10ರಂದು ಸ್ಕೂಟಿ ಚಲಾಯಿಸಿಕೊಂಡು ಹೋಗುತ್ತಿದ್ದರು. ತಾಳಗುಪ್ಪ – ಜೋಗ ರಸ್ತೆಯಲ್ಲಿ ಜೋಗ ಮಾರ್ಗವಾಗಿ ತೆರಳುತ್ತಿದ್ದ ಅವರಿಗೆ ಮನೆಮನೆ ಕಟ್ಟಿಗೆ ಡಿಪೋ ಕ್ರಾಸಿನ ಬಳಿ ಲಾರಿ ಗುದ್ದಿತು. ಶಿವಮೊಗ್ಗದ ಶ್ರೀನಿವಾಸ ಎಂಬಾತ ಲಾರಿ ಗುದ್ದಿದ ಪರಿಣಾಮ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು.
ಗಾಯಗೊAಡ ಹನುಮಂತ ನಾಯ್ಕರನ್ನು ಫೆ 10ರಂದು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಯವರು ಅಲ್ಲಿ ಅವರನ್ನು ದಾಖಲಿಸಿಕೊಳ್ಳಲು ಒಪ್ಪಲಿಲ್ಲ. ಹೀಗಾಗಿ ಮತ್ತೆ ಹನುಮಂತ ನಾಯ್ಕ ಅವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ತಂದು ಆರೈಕೆ ಮಾಡಲಾಯಿತು.
ಫೆ 11ರಂದು ಅವರು ಕೊನೆ ಉಸಿರೆಳೆದರು. ಈ ಬಗ್ಗೆ ಹನುಮಂತ ನಾಯ್ಕರ ಪುತ್ರ ರವಿ ನಾಯ್ಕ ಸಿದ್ದಾಪುರ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದಾರೆ. ಲಾರಿ ಚಾಲಕನ ಅತಿ ವೇಗದಿಂದ ಈ ಸಾವು ನಡೆದಿರುವುದಾಗಿ ಅವರು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




