ಮಾಜಿ ಸೈನಿಕರ ಕಚೇರಿ ನಡೆಸಲು ನೀಡಲಾಗಿದ್ದ ಕೊಠಡಿಯ ಬೀಗ ಒಡೆಯುವ ಮೂಲಕ ನಗರಸಭೆ ಅಧಿಕಾರಿಗಳು ಉದ್ದಟತನ ಪ್ರದರ್ಶಿಸಿದ್ದಾರೆ. ಈ ವಿಷಯ ಅರಿವಿಗೆ ಬಂದ ನಂತರ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಬಹಿರಂಗವಾಗಿ ಕ್ಷಮಾಪಣೆ ಕೇಳುವ ಮೂಲಕ ತಮ್ಮ ವರ್ಚಸ್ಸು ಹೆಚ್ಚಿಸಿಕೊಂಡಿದ್ದಾರೆ.
ಗಣಪತಿ ನಾಯ್ಕ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಗರಸಭೆಯಿಂದ ಮಾಜಿ ಸೈನಿಕರಿಗಾಗಿ ಕೊಠಡಿ ನೀಡಿದ್ದರು. ಸೈನಿಕರು ದೇಶಕ್ಕೆ ಸಲ್ಲಿಸಿದ ಸೇವೆ ಸ್ಮರಿಸಿ ಅವರಿಗೆ ಕಚೇರಿ ನಡೆಸಲು ಗೌರವಾರ್ಥವಾಗಿ ಕೊಠಡಿ ನೀಡಲಾಗಿತ್ತು. ಎರಡು ವರ್ಷಗಳಿಂದ ಶಾಸಕರ ಮಾದರಿ ಶಾಲೆಯ ಬಳಿಯ ಶೌಚಾಲಯದ ಸನೀಹ ಚಿಕ್ಕ ಕೋಣೆಯಲ್ಲಿ ಮಾಜಿ ಸೈನಿಕರ ಚಟುವಟಿಕೆಗಳು ನಡೆಯುತ್ತಿದ್ದವು. ಆದರೆ, ಇದನ್ನು ಸಹಿಸದ ನಗರಸಭೆ ಅಧಿಕಾರಿಗಳು ಮಂಗಳವಾರ ಮಾಜಿ ಸೈನಿಕರ ಗಮನಕ್ಕೆ ತಾರದೇ ಆ ಕೊಠಡಿಯ ಬೀಗ ಮುರಿದು ಒಳಗೆ ಪ್ರವೇಶಿಸಿದ್ದಾರೆ.
ಈ ಕಚೇರಿಯನ್ನು ನಗರಸಭೆಯವರು ತಾತ್ಕಾಲಿಕವಾಗಿಯೇ ಮಾಜಿ ಸೈನಿಕರಿಗೆ ನೀಡಿದ್ದರು. ಯಾವುದೇ ಹೆಚ್ಚುವರಿ ಷರತ್ತು ಸಹ ವಿಧಿಸಿರಲಿಲ್ಲ. ಹೀಗಾಗಿ ಸೈನಿಕರು ತಮ್ಮ ಕಚೇರಿ ಕಡತಗಳ ಜೊತೆ ಕೆಲ ದಾಖಲೆಗಳನ್ನು ಇರಿಸಿಕೊಂಡಿದ್ದರು. ಆದರೆ, ನಗರಸಭೆಯವರು ಮಾಜಿ ಸೈನಿಕರಿಗೆ ಗೊತ್ತಾಗದಂತೆ ಅಲ್ಲಿಗೆ ತೆರಳಿ ಆ ಕಚೇರಿಯ ಬೀಗ ಒಡೆದರು. ಪ್ರಶ್ನಿಸಿದಾಗ `ಬೀಗದ ಖರ್ಚು ಕೊಡುತ್ತೇವೆ’ ಎಂದು ಹಾರಿಕೆ ಉತ್ತರ ನೀಡಿದರು.
`ನಗರಸಭೆಯವರೇ ಈ ಹಿಂದೆ ಗೌರವಯುತವಾಗಿ ಕೊಠಡಿ ಕೊಟ್ಟಿದ್ದರು. ಅದನ್ನು ಮರಳಿಸುವಂತೆ ಕೇಳಿದ್ದರೆ ಗೌರವಯುತವಾಗಿ ಮರಳಿಸುತ್ತಿದ್ದೇವು. ಮಾಜಿ ಸೈನಿಕರಿಗೆ ಅವಮಾನ ಮಾಡುವ ಉದ್ದೇಶದಿಂದ ಬೀಗ ಒಡೆಯಲಾಗಿದೆ’ ಎಂದು ಕೆಲವರು ಬೇಸರವ್ಯಕ್ತಪಡಿಸಿದರು. ಈ ವಿಷಯ ಅರಿವಿಗೆ ಬಂದ ನಂತರ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಪ್ರಕರಣವನ್ನು ವಿಚಾರಿಸಿದರು. ಅದಾದ ನಂತರ ಮಾಜಿ ಸೈನಿಕರಿಗೆ ನಗರಸಭೆಯಿಂದ ಆದ ಅವಮಾನಕ್ಕಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಿದರು. ಅಧಿಕಾರಿಗಳು ಮಾಡಿದ ತಪ್ಪಿಗೆ ಅಧ್ಯಕ್ಷೆ ಕ್ಷಮೆ ಕೋರುವ ಮೂಲಕ ಅವರು ದೊಡ್ಡವರೆನಿಸಿದರು.




