ಸಾರ್ವಜನಿಕರು ಹಾಗೂ ಸರ್ಕಾರದ ನಡುವೆ ಪ್ರಾಥಮಿಕ ಸಂಪರ್ಕ ಕೊಂಡಿಯಾಗಿ ಕೆಲಸ ನಿರ್ವಹಿಸುವ ಗ್ರಾಮ ಲೆಕ್ಕಿಗರನ್ನು ಸರ್ಕಾರ `ಗ್ರಾಮ ಆಡಳಿತಾಧಿಕಾರಿ’ ಎಂದು ಮರು ನಾಮಕರಣ ಮಾಡಿದೆ. ಆದರೆ, ಗ್ರಾಮ ಆಡಳಿತಾಧಿಕಾರಿಗಳಿಗೆ ಅಗತ್ಯವಿರುವ ಕನಿಷ್ಟ ಸೌಕರ್ಯವನ್ನು ಈವರೆಗೂ ನೀಡಿಲ್ಲ. ಈ ಹಿನ್ನಲೆ ಗ್ರಾಮ ಆಡಳಿತಾಧಿಕಾರಿಗಳು ನಡೆಸುತ್ತಿರುವ ಪ್ರತಿಭಟನೆ 4 ದಿನ ಪೂರೈಸಿದೆ.
ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಿನ ಆಡಳಿತ ಸೌಧದ ಎದುರು ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕಪ್ಪು ಪಟ್ಟಿ ಧರಿಸಿ ಧರಣಿಗೆ ಕೂತಿದ್ದಾರೆ. ಮೊದಲ ಹಂತದಲ್ಲಿ ನಡೆಸಿದ ಪ್ರತಿಭಟನೆಗೆ ಬಗ್ಗಿದ ಸರ್ಕಾರ ಕೆಲ ಭರವಸೆಗಳನ್ನು ನೀಡಿದ್ದು, ಅದನ್ನು ಈವರೆಗೂ ಈಡೇರಿಸಿಲ್ಲ. ಹೀಗಾಗಿ ಎರಡನೇ ಹಂತದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ಧರಣಿ ನಡೆಸುತ್ತಿದ್ದಾರೆ. ಆದರೆ, ವರ್ಷವಿಡೀ ಗ್ರಾಮ ಆಡಳಿತಾಧಿಕಾರಿಗಳ ಸೇವೆ ಪಡೆಯುವ ಸರ್ಕಾರ ಈ ಬಾರಿ ಅವರ ಸಮಸ್ಯೆ ಆಲಿಸುವ ಪ್ರಯತ್ನ ನಡೆಸಿಲ್ಲ.
2024ರ ನವೆಂಬರ್ 26ರಿಂದ ಅಕ್ಟೊಬರ್ 3ರವರೆಗೆ ಗ್ರಾಮ ಆಡಳಿತಾಧಿಕಾರಿಗಳು ಪ್ರತಿಭಟನೆ ನಡೆಸಿದ್ದರು. ಆಗ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳೇ ರಾಜಿ ಮಾಡಿಸಿ ಪ್ರತಿಭಟನೆ ಹಿಂಪಡೆಯುವAತೆ ಕೋರಿದ್ದರು. ಆ ವೇಳೆ ಹಲವು ಭರವಸೆಗಳನ್ನು ನೀಡಿದ್ದು, ಶೀಘ್ರದಲ್ಲಿಯೇ ಈಡೇರಿಸುವ ಆಶ್ವಾಸನೆ ನೀಡಿದ್ದರು. ಆದರೆ, ಆ ಆಶ್ವಾಸನೆಗಳೆಲ್ಲವೂ ಸುಳ್ಳಾದವು. ಈ ಹಿನ್ನಲೆ ಗ್ರಾಮ ಆಡಳಿತಾಧಿಕಾರಿಗಳು 2025ರ ಫೆ 10ರಿಂದ ಎರಡನೇ ಹಂತದ ಪ್ರತಿಭಟನೆ ಶುರು ಮಾಡಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳ ಪ್ರತಿಭಟನೆಯಿಂದ ಸಾರ್ವಜನಿಕ ಸಮಸ್ಯೆಗಳು ದುಪ್ಪಟ್ಟಾಗಿದೆ.
ಇನ್ನೂ ಮೊದಲ ಹಂತದ ಮುಷ್ಕರದ ನಂತರ ಗ್ರಾಮ ಆಡಳಿತಾಧಿಕಾರಿಗಳ ಕೆಲಸದ ಒತ್ತಡ ಇನ್ನಷ್ಟು ಹೆಚ್ಚಾಗಿದೆ. ಗ್ರಾಮ ಆಡಳಿತಾಧಿಕಾರಿಗಳಿಗೆ ಕನಿಷ್ಟ ಒಂದು ಕಚೇರಿ, ಖುರ್ಚಿ-ಟೇಬಲ್ ವ್ಯವಸ್ಥೆಯನ್ನು ಮಾಡಲು ಸಾಧ್ಯವಾಗದ ಸರ್ಕಾರ 21 ಮೊಬೈಲ್ ಆಫ್’ಗಳ ಮೂಲಕ ಕೆಲಸ ನಿರ್ವಹಿಸುವ ಬಗ್ಗೆ ಸರ್ಕಾರ ಸೂಚಿಸುತ್ತಿದೆ. ಸಣ್ಣ-ಪುಟ್ಟ ಲೋಪಗಳಾದರೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಹೊಣೆಗಾರರನ್ನಾಗಿಸಲಾಗುತ್ತಿದೆ. ಆಫ್ ನಿರ್ವಹಣೆಗಳಿಗಾಗಿ ಉತ್ತಮ ಫೋನ್, ಕಡತಗಳನ್ನು ಇರಿಸಿಕೊಳ್ಳಲು ಕಪಾಟು, ಕೆಲಸಕ್ಕೆ ಅನುಕೂಲವಾಗುವಂತೆ ಲ್ಯಾಪ್ಟಾಪ್ ಒದಗಿಸುವಂತೆ ಗ್ರಾಮ ಆಡಳಿತಾಧಿಕಾರಿಗಳು ಹೇಳಿದರೂ ಅದನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ.
ವರ್ಗಾವಣೆ, ನೇಮಕಾತಿ, ಪದೋನ್ನತಿ ವಿಷಯದಲ್ಲಿ ಸಹ ಗ್ರಾಮ ಆಡಳಿತಾಧಿಕಾರಿಗಳಿಗೆ ಪದೇ ಪದೇ ಅನ್ಯಾಯವಾಗುತ್ತಿದೆ. ಇದರಿಂದ ನೌಕರರಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹಿನ್ನಡೆ, ಪತಿ-ಪತ್ನಿಯರ ನಡುವೆ ವಿರಸ, ಪಾಲಕರ ಪೋಷಣೆಗೆ ಅನಾನುಕೂಲ ಸೇರಿ ಹಲವು ಬಗೆಯ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಿದೆ. ಸರ್ಕಾರಕ್ಕೆ ಯಾವುದೇ ನಷ್ಟವಾಗದ ರೀತಿಯಲ್ಲಿ ಕೆಸಿಎಸ್ಆರ್ ನಿಯಮ – 16 ಮರುಸ್ಥಾಪಿಸಿದಲ್ಲಿ ಈ ಎಲ್ಲಾ ಸಮಸ್ಯೆಗೂ ಪರಿಹಾರ ಆಗುವ ಬಗ್ಗೆ ಅರಿವಿದ್ದರೂ ಸರ್ಕಾರ ಆ ಬಗ್ಗೆ ಆಸಕ್ತಿವಹಿಸಿಲ್ಲ.
ನಾಗರಿಕರ ಬೆಂಬಲ:
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳಿಗೆ ಯಲ್ಲಾಪುರದ ನಾಗರಿಕ ವೇದಿಕೆ ಬೆಂಬಲವ್ಯಕ್ತಪಡಿಸಿದೆ. ನಿವೃತ್ತ ತಹಶೀಲ್ದಾರಾದ ಡಿ ಜಿ ಹೆಗಡೆ, ತುಳಸಿ ಪಾಲೇಕರ್, ನಿವೃತ್ತ ಪ್ರಾಚಾರ್ಯರಾದ ಶ್ರೀರಂಗ ಕಟ್ಟಿ, ಬೀರಣ್ಣ ನಾಯಕ ಮೊಗಟಾ, ನ್ಯಾಯವಾದಿ ಬಿಬಿ ಅಮೀನಾ, ಅಂಬೇಡ್ಕರ್ ಸಂಘದ ಅಧ್ಯಕ್ಷ ಜಗನ್ನಾಥ ರೇವಣಕರ್, ನಿವೃತ್ತ ಯೋಧ ಮಾದೇವಚಂದ್ರ ಪಂಡ್ರಪುರ, ನಿವೃತ್ತ ಅಂಚೆ ನೌಕರ ನಾಗೇಶ ಯಲ್ಲಾಪುರಕರ್, ಪ್ರಮುಖರಾದ ಗೋಪಾಲಕೃಷ್ಣ ಭಟ್ಟ ತಾರಿಮಕ್ಕಿ, ಲಕ್ಷಿನಾರಾಯಣ ಭಟ್ಟ ತೋಟ್ಮನೆ ಪ್ರತಿಭಟನಾಕಾರರಿಗೆ ಬೆಂಬಲ ನೀಡಿದರು. ಈ ವೇಳೆ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಮಾತನಾಡಿ `ಗ್ರಾಮ ಆಡಳಿತಾಧಿಕಾರಿಗಳ ಸಮಸ್ಯೆ ಬಗ್ಗೆ ವಿವರಿಸಿ ನಾವೆಲ್ಲರೂ ಸರ್ಕಾರಕ್ಕೆ ತಾವು ಪತ್ರ ಬರೆಯುವೆವು’ ಎಂದು ತಿಳಿಸಿದರು.





