ಕರಾವಳಿ ನಿಯಂತ್ರಣ ವಲಯಕ್ಕೆ ಒಳಪಡುವ ಪ್ರದೇಶದಲ್ಲಿನ ಕಾಂಡ್ಲಾ ಗಿಡಗಳ ಮೇಲೆ ದಬ್ಬಾಳಿಕೆ ಮುಂದುವರೆದಿದೆ. ಗುರುವಾರ ಸಹ ಹಲವು ಬಗೆಯ ಕಾಂಡ್ಲಾ ಗಿಡಗಳನ್ನು ಕಿಡಿಗೇಡಿಗಳು ಕಡಿದಿದ್ದಾರೆ.
ಕಾರವಾರದಲ್ಲಿ ಕಾಳಿ ನದಿ ಸಮುದ್ರ ಸೇರುವ ಅನತಿ ದೂರದಲ್ಲಿ ಸಾವಿರಾರು ಕಾಂಡ್ಲಾ ಗಿಡಗಳಿವೆ. ಸಮುದ್ರ ಕೊರೆತ, ಮೀನುಗಳ ಸಂತಾನೋತ್ಪತ್ತಿ ಸೇರಿ ಪರಿಸರ ಸಮತೋಲನ ವಿಷಯವಾಗಿ ಕಾಂಡ್ಲಾ ಗಿಡಗಳ ಕೊಡುಗೆ ಅಪಾರ. ಹೀಗಾಗಿ ಕಾಂಡ್ಲಾ ಗಿಡಗಳ ರಕ್ಷಣೆಗೆ ಅರಣ್ಯ ಇಲಾಖೆಯೂ ಸಾಕಷ್ಟು ಶ್ರಮಿಸುತ್ತಿದೆ. ಈ ನಡುವೆಯೂ ಕಿಡಿಗೇಡಿಗಳು ಅನಗತ್ಯವಾಗಿ ಗಿಡಗಳನ್ನು ಕಡಿದು ನಾಶ ಮಾಡುತ್ತಿದ್ದಾರೆ.
ಕೆಲ ತಿಂಗಳ ಹಿಂದೆ ಸಹ ಅಪಾರ ಪ್ರಮಾಣದಲ್ಲಿ ಕಾಂಡ್ಲಾ ಗಿಡಗಳನ್ನು ಕಡಿಯಲಾಗಿತ್ತು. ಈ ವಿಷಯ ಮುಖ್ಯಮಂತ್ರಿ ಕಚೇರಿಯವರೆಗೂ ಸದ್ದು ಮಾಡಿತ್ತು. ಆದರೆ, ಆ ವೇಳೆ ಕಾಂಡ್ಲಾ ಗಿಡ ಕಟಾವು ಮಾಡಿದವರನ್ನು ಪತ್ತೆ ಮಾಡಲು ಅರಣ್ಯ ಸಿಬ್ಬಂದಿಯಿoದ ಸಾಧ್ಯವಾಗಲಿಲ್ಲ. `ಉಳಿದ ಗಿಡಗಳನ್ನಾದರೂ ರಕ್ಷಣೆ ಮಾಡಿ’ ಎಂದು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರು. ಆದರೆ, ಇದೀಗ ಅದೂ ಸಾಧ್ಯವಾಗುತ್ತಿಲ್ಲ.
ಗುರುವಾರ ಸಂಜೆ ಕೋಡಿಭಾಗದ ಕಾಳಿ ನದಿ ಅಂಚಿನಲ್ಲಿ ಸೋನಾರೇಶಿಯಾ ಫಿಸಲರೀಸ್ ಪ್ರಬೇದಕ್ಕೆ ಸೇರಿದ ಕಾಂಡ್ಲಾ ಕಾಡನ್ನು ಧ್ವಂಸ ಮಾಡಲಾಗಿದೆ. ಗಿಡಗಳ ಕಟಾವು ನಡೆಸಿ ಅದರ ಮೇಲೆ ಮಣ್ಣಿನ ರಾಶಿ ಹೇರಲಾಗಿದೆ. ಸಿಆರ್ಜಡ್ ಮೊದಲ ವಲಯದಲ್ಲಿನ ಕಾಂಡ್ಲಾ ಗಿಡಗಳ ನಾಶ ನಡೆದಿರೂ ಅರಣ್ಯ ಇಲಾಖೆ ಮೌನವಾಗಿದೆ.
ನಂದನಗದ್ದಾದಲ್ಲಿರುವ ಸಂತೋಷಿಮಾತಾ ದೇವಾಲಯಕ್ಕೆ ಹೊಂದಿಕೊAಡಿರುವ ಗಾಬೀತವಾಡ ಹಾಗೂ ನದಿವಾಡ ಪ್ರದೇಶದಲ್ಲಿ ಕಾಂಡ್ಲಾ ಗಿಡಗಳು ಸಾವನಪ್ಪಿದೆ. ಜೆಸಿಬಿ ಯಂತ್ರಗಳನ್ನು ಬಳಸಿ ಇಲ್ಲಿ ಗಿಡ ನಾಶ, ಮಣ್ಣು ಹುಯ್ಯುವಿಕೆ ನಡೆದರೂ ಅರಣ್ಯ ಇಲಾಖೆಗೆ ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.
`ಕಾಂಡ್ಲಾ ಗಿಡ ನಾಶದ ಬಗ್ಗೆ ಅರಣ್ಯಾಧಿಕಾರಿಗಳಿಗೆ ಫೋನ್ ಮಾಡಿದರೂ ಕರೆ ಸ್ವೀಕರಿಸಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ. ಹೀಗಾಗಿ `ಕಾಂಡ್ಲಾ ಗಿಡ ಕಟಾವು ಅರಣ್ಯ ಸಿಬ್ಬಂದಿಯ ಮುತುವರ್ಜಿಯಲ್ಲಿ ನಡೆದಿದೆ’ ಎಂಬ ಆರೋಪವೂ ವ್ಯಕ್ತವಾಗಿದೆ.




