ಶಿರಸಿ ಹಾಗೂ ಮುಂಡಗೋಡಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಮುಂಡಗೋಡದ ರಾಮಾಪುರದಿಂದ ಅಟ್ಟಣಗಿ ಗ್ರಾಮಕ್ಕೆ ಹೋಗುವ ರಸ್ತೆ ಅಂಚಿನ ಪ್ರದೇಶ ಚೌಡೇಶ್ವರಿ ದೇವಸ್ಥಾನದ ಜಾತ್ರೆ ಗದ್ದುಗೆಯ ಬಳಿ ಏಳು ಜನ ಅಂದರ್ ಬಾಹರ್ ಆಡುತ್ತಿದ್ದರು. ಹಸಿರು ಬಣ್ಣದ ಚಾಪೆ ಹಾಸಿಕೊಂಡು ಅವರೆಲ್ಲರೂ ಮೋಜು-ಮಸ್ತಿಯಲ್ಲಿ ತೊಡಗಿದ್ದರು. ಈ ವಿಷಯ ಅರಿತ ಮುಂಡಗೋಡಿನ ಪೊಲೀಸ್ ಉಪನಿರೀಕ್ಷಕ ಹನುಮಂತ ಕುಡಗುಂಟಿ ದಾಳಿ ನಡೆಸಿದರು. ಫೆ 26ರ ಈ ದಾಳಿಯಲ್ಲಿ ರಾಮಾಪುರದ ಪರಶುರಾಮ ಲಮಾಣಿ, ಮಂಜುನಾಥ ಭೋವಿ ಸಿಕ್ಕಿ ಬಿದ್ದರು.
ಸಿಕ್ಕಿ ಬಿದ್ದವರ ಬಳಿಯಿದ್ದ 14 ಸಾವಿರ ರೂ ಹಣವನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ರಾಮಾಪುರದ ರವಿ ಬಸ್ಸಾಪುರ, ಈಶ್ವರ ವಡ್ಡರ್, ಸಮೀರ ಕಲಕೊಪ್ಪ, ನಾಗಣ್ಣ ಕಲಕೊಪ್ಪ, ಮಹೇಶ ಹಿರೇಹಳ್ಳಿ ಓಡಿ ಪರಾರಿಯಾದರು. ಅದಾಗಿಯೂ ಪೊಲೀಸರು ಅವರೆಲ್ಲರ ವಿವರ ಪಡೆದು ಪ್ರಕರಣ ದಾಖಲಿಸಿದರು.
ಶಿರಸಿಯ ಸಾಲ್ಕಣಿ ಬಳಿಯ ಕುದ್ರಗೋಡ ಗ್ರಾಮದ ಪಾಳದಬೈಲಿನಲ್ಲಿ ಸಹ ಫೆ 26ರ ರಾತ್ರಿ ಸಾಲ್ಕಣಿಯ ಶಿವು ಪೂಜಾರಿ ಇಸ್ಪಿಟ್ ಆಡಿಸುತ್ತಿದ್ದರು. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಸಂತೋಷಕುಮಾರ ಎಂ ಅಲ್ಲಿ ದಾಳಿ ನಡೆಸಿದರು. ಆಗ ಶಿವು ಪೂಜಾರಿ ಜೊತೆಯಿದ್ದ ಕುದ್ರಗೋಡ ಪಾಳದಬೈಲಿನ ಶ್ರೀಧರ ಪೂಜಾರಿ ಸಿಕ್ಕಿಬಿದ್ದರು. ಇನ್ನಿಬ್ಬರು ಓಡಿ ಪರಾರಿಯಾದರು. ಅದಾಗಿಯೂ, ಸಿಕ್ಕಿ ಬಿದ್ದ ಇಬ್ಬರು ಉಳಿದ ಇಬ್ಬರ ಹೆಸರು ಬಾಯ್ಬಿಡಲಿಲ್ಲ.
ಜೂಜಾಟಕ್ಕೆ ಬಳಸಿದ್ದ 1500ರೂ ಹಣ, ಉರಿದ ಮೇಣದಬತ್ತಿ ಹಾಗೂ ಇಸ್ಪಿಟ್ ಎಲೆಗಳನ್ನು ಪೊಲೀಸರು ವಶಕ್ಕೆ ಪಡೆದರು. ಇಬ್ಬರು ಅಪರಿಚಿತರು ಸೇರಿ ಸಿಕ್ಕಿ ಬಿದ್ದವರ ವಿರುದ್ಧ ಪ್ರಕರಣ ದಾಖಲಿಸಿದರು.





