ಬಂದರು ಯೋಜನೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲಾಡಳಿತದ ವಿರುದ್ಧ ವ್ಯಂಗ್ಯವಾಗಿ `ಅಭಿನಂದನೆ’ ಬರೆದ ಮೀನುಗಾರರಿಬ್ಬರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಕಾರವಾರದ ಮೀನುಗಾರ ವಿನಾಯಕ ಹರಿಕಂತ್ರ ಹಾಗೂ ಸಂತೋಷ ಎಂಬಾತರು ವಾಟ್ಸಪ್ ಗ್ರೂಪಿನಲ್ಲಿ ಅಸಂಬದ್ಧ ಬರಹಗಳನ್ನು ಶೇರ್ ಮಾಡಿ ಸಿಕ್ಕಿ ಬಿದ್ದಿದ್ದಾರೆ!
ಹೊನ್ನಾವರದ ಬಂದರು ಸರ್ವೇ ಕಾರ್ಯಾಚರಣೆ ವೇಳೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು ಟಿವಿ 9 ಸುದ್ದಿ ವಾಹಿನಿಗೆ ಹೇಳಿಕೆಯೊಂದನ್ನು ನೀಡಿದ್ದರು. ಆ ವಿಡಿಯೋ ವರದಿಯನ್ನು ಮಾರ್ಚ 9ರ ಸಂಜೆ 7 ಗಂಟೆ ಅವಧಿಗೆ ವಿನಾಯಕ ಹರಿಕಂತ್ರ ಅವರು `ಜಿಲ್ಲಾ ಹರಿಕಂತ್ರ ಮಹಾಜನ’ ಎಂಬ ವಾಟ್ಸಪ್ ಗುಂಪಿನಲ್ಲಿ ಶೇರ್ ಮಾಡಿದ್ದರು. ಅದರೊಂದಿಗೆ `ಮೀನುಗಾರರನ್ನು ಅನ್ಯಾಯದಿಂದ ಬಂಧಿಸಿದ ಹಾಗೂ ರಾಜಕಾರಣಿಗಾಗಿ ದುಡಿದ ತಮಗೆ ಅಭಿನಂದನೆಗಳು ಸರ್’ ಎಂದು ಬರೆದುಕೊಂಡಿದ್ದರು.
ಇಷ್ಟೇ ಅಲ್ಲದೇ, `ಮುಂದಿನ ದಿನಗಳಲ್ಲಿ ನಾವು ಇರುತ್ತೇವೋ ಇಲ್ಲಾ ಅಂತ ಗೊತ್ತಿಲ್ಲ. ಭಾರತ ದೇಶಕ್ಕಾಗಿ ಉತ್ತರ ಕನ್ನಡದಲ್ಲಿ ಅಭಿವೃದ್ದಿ ಮಾಡಬೇಕಾ? ಅದು ನಮ್ಮ ಬಡ ಮೀನುಗಾಗರರನ್ನು ಬಂಧಿಸಿ ಸರ್? ನೀವು ಹೇಳುತ್ತೀರಾ, ಮೀನುಗಾರರಿಗೆ ಯಾವುದೇ ತೊಂದರೆ ಆಗಲ್ಲ ಅಂತಾ ಸರ್? ಯಾಕೆ ಅಂದರೆ ಬಂದರು ಆಗುವಾಗ ಮೀನುಗಾರಿಕೆ ಉದ್ಯೋಗವೇ ಇರಲ್ಲ ಸರ್.. ಯಾರು ಕಮೀಷನ್ ಆಸೆಗೆ ಇದ್ದರವರನ್ನು ಬಂಧಿಸಿ ಸರ್’ ಎಂದು ವಿಡಿಯೋ ಜೊತೆ ಬರೆದಿದ್ದರು.
`ಉತ್ತರ ಕನ್ನಡದಲ್ಲಿ ಬಂದರು ಆದರೆ ಶಾಸಕರಿಗೆ, ಮಂತ್ರಿಗಳಿಗೆ, ನಾಯಕ, ಮುಂಖoಡರಿಗೂ ಕಮಿಷನ್ ಇದೆ ಸರ್. ಅವರನ್ನು ಮೊದಲು ಬಂಧಿಸಿ ಸರ್. ಯಾವ ಮೀನುಗಾರನು ಕಮಿಷನ್ ಏಜೆಂಟ ಇಲ್ಲಾ. ಮೀನುಗಾರಿಕೆ ಮಾಡೇ ಸಂಸಾರ ನಡೆಸುವ ಸೈನಿಕ ನಿಮಗೆ ಅಭಿನಂದನೆ ಸರ್. ಉತ್ತರ ಕನ್ನಡದಲ್ಲಿ ಮೀನುಗಾರರನ್ನು ಸರ್ವ ನಾಶಮಾಡಲು ಅಡಿಪಾಯ ಹಾಕಿದ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಅಭಿನಂದನೆಗಳು ಸರ್’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರ ಹೇಳಿಕೆಯ ಅಡಿ ಬರೆದಿದ್ದರು.
ಇದಕ್ಕೆ ಸಂತೋಷ ಎಂಬಾತರು `ಮೀನುಗಾರರಿಗೆ ಆತ್ಮೀಯರಾಗಿರುವವರು, ಒಬ್ಬರೂ ಜನಪ್ರತಿನಿಧಿ, ಎಮ್ ಎಲ್ ಎ ನ್ನೋಬ್ಬ ಜನಪ್ರತಿನಿಧಿ, ಮೀನುಗಾರರ ಸಚಿವರು ಹಾಗೂ ಜನಪ್ರತಿನಿಧಿ ಎಮ್.ಎಲ್.ಸಿ ಇದ್ದರೂ ಮೀನುಗಾರರಿಗೆ ಮಾರಾಕವಾಗಿರುವ ಸಾಗರಮಾಲಾ ಯೋಜನೆಯನ್ನು ಅವರಿಂದ ತಡೆಯಲು ಸಾಧ್ಯವಿಲ್ಲವೇ?’ ಎಂದು ಅದೇ ವಾಟ್ಸಪ್ ಗುಂಪಿನಲ್ಲಿ ಪ್ರಶ್ನಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಅಸಬಂದ್ಧವಾಗಿ ಬರೆಯುವುದನ್ನು ಗಂಭೀರವಾಗಿ ಸ್ವೀಕರಿಸುವುದಾಗಿ ಸೂಚನೆ ನೀಡಿದ್ದ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದರು. ಸರ್ಕಾರಿ ಯೋಜನೆ ಬಗ್ಗೆ ತಪ್ಪು ಕಲ್ಪನೆ, ಪೊಲೀಸರ ವಿರುದ್ಧ ಕೆಟ್ಟ ಸಂದೇಶ ರವಾನಿಸುವ ಉದ್ದೇಶ ಹಾಗೂ ಮೀನುಗಾರಿಕಾ ಸಮುದಾಯದವರ ನಡುವೆ ವೈಷಮ್ಯ ಭಾವನೆ ಮೂಡುವಂತೆ ಮಾಡಿದ ಕಾರಣ ಕಾರವಾರ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಗೌಥಮ್ ರಾಜು ಈ ಬಗ್ಗೆ ವರದಿ ಸಲ್ಲಿಸಿದರು. ಬಂದರು ನಿರ್ಮಾಣ ವಿಷಯದಲ್ಲಿ ಮೀನುಗಾರರು ಹಾಗೂ ಜನರಲ್ಲಿ ತಪ್ಪು ಸಂದೇಶ ಮೂಡುವಂತೆ ಮಾಡಿದ ಕಾರಣ ವಿನಾಯಕ ಹರಿಕಂತ್ರ ಹಾಗೂ ಸಂತೋಷ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.







