ಅoಗನವಾಡಿಗೆ ಸರಬರಾಜಾಗುವ ಪೌಷ್ಠಿಕ ಆಹಾರಗಳನ್ನು ಕದ್ದು ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿದನ್ನು ಹಳಿಯಾಳ ಆಹಾರ ನಿರೀಕ್ಷಕ ಶಿವಾಜಿ ತೊಂಡಲೆ ಪತ್ತೆ ಮಾಡಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಮುಖಂಡ ವಿಷ್ಣು ಮಿಶಾಳಿ ಮುಂದಾಳತ್ವದಲ್ಲಿ ಈ ಕಳ್ಳ ಸಾಗಾಣಿಕೆ ನಡೆದಿರುವುದನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ವಿಷ್ಣು ಮಿಶಾಳಿ, ಸಹದೇವ ಗೌಡ ಹಾಗೂ ಲಕ್ಷಣ ಹನಗುಂದ ಸೇರಿ ಮಕ್ಕಳ ಆಹಾರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು. ಈ ಹಿನ್ನಲೆ ಆ ಮೂವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದ್ದು, ಹದೇವ ಗೌಡ ಹಾಗೂ ಲಕ್ಷಣ ಹನಗುಂದ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯ ಆರೋಪಿ ವಿಷ್ಣು ಮಿಶಾಲಿ ತಲೆಮರೆಸಿಕೊಂಡಿದ್ದಾರೆ.
ಹಳಿಯಾಳದ ಬಿಕೆ ಹಳ್ಳಿಯ ಸಹದೇವ ಗೌಡ ಅವರ ಕೊಟ್ಟಿಗೆಯಲ್ಲಿ 1.75 ಲಕ್ಷ ರೂ ಮೌಲ್ಯದ ಆಹಾರ ಪದಾರ್ಥಗಳಿದ್ದವು. ಮುಖ್ಯವಾಗಿ ಅಂಗನವಾಡಿ ಮಕ್ಕಳಿಗೆ ನೀಡುವ ಪುಷ್ಠಿ ಹಾಗೂ ಹಾಲಿನ ಪುಡಿಗಳನ್ನು ಕೊಟ್ಟಿಗೆಯಲ್ಲಿ ಅಡಗಿಸಿಟ್ಟಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದರು. ಈ ಪ್ರಕರಣದ ಬೆನ್ನು ಬಿದ್ದ ಅಧಿಕಾರಿಗಳಿಗೆ ದೇಶಪಾಂಡೆನಗರದ ಲಕ್ಷಣ ಹನಗುಂದ ಎಂಬಾತ ಅಂಗನವಾಡಿ ಆಹಾರ ಕದ್ದು ಸಾಗಿಸುತ್ತಿರುವುದು ಗೊತ್ತಾಗಿದೆ.
ಸೋಮವಾರ ತಹಶೀಲ್ದಾರ್ ಪ್ರವೀಣ ಹುಚ್ಚಣ್ಣನವರ್ ನೇತ್ರತ್ವದಲ್ಲಿ ದಾಳಿ ನಡೆದಿದ್ದು, ಆ ಆಹಾರ ಪರಿಕ್ಕರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದರು. ಪ್ರಕರಣ ವಿಚಾರಣೆ ನಡೆಸಿದಾಗ ಕಾಂಗ್ರೆಸ್ ಮುಖಂಡನ ಹೆಸರು ಮುನ್ನೆಲೆಗೆ ಬಂದಿದೆ. ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿದ್ದ ಹಾಲಿನ ಪುಡಿ ತುಂಬಿದ 35 ಚೀಲ, 7 ಕೆಜಿ ಅಕ್ಕಿ, 79 ಪುಷ್ಠಿ ಪ್ಯಾಕೇಟುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.







