ಕಳೆದ ಆರು ತಿಂಗಳಿನಿoದ ಶಿರಸಿ ಶಾಸಕ ಭೀಮಣ್ಣ ನಾಯ್ಕರ ವಿರುದ್ಧ ಕಿಡಿಕಾರುತ್ತಿದ್ದ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಇದೀಗ ಅವರನ್ನು ಅಭಿನಂದಿಸುವುದಾಗಿ ಹೇಳಿದ್ದಾರೆ.
ನಾಲ್ಕುವರೆ ತಿಂಗಳ ನಂತರವಾದರೂ ಶಿರಸಿ ಬಸ್ ನಿಲ್ದಾಣ ಉದ್ಘಾಟನೆ ಮಾಡುತ್ತಿರುವುದಕ್ಕಾಗಿ ಅವರಿಗೆ ಅಭಿನಂದಿಸುವುದಾಗಿ ಅನಂತಮೂರ್ತಿ ಹೆಗಡೆ ಹೇಳಿಕೆ ನೀಡಿದ್ದಾರೆ. ಜೊತೆಗೆ ತಮ್ಮ ಹೋರಾಟದ ಎಚ್ಚರಿಕೆ ಪರಿಣಾಮ ಶಿರಸಿ ಬಸ್ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ ಎಂದವರು ತಿಳಿಸಿದ್ದಾರೆ.
`ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನದಿಂದ ಶಿರಸಿ ಬಸ್ ನಿಲ್ದಾಣ ಕೆಲಸ ನಡೆದಿದ್ದು, ಕಾಮಗಾರಿ ಮುಗಿದು 4 ತಿಂಗಳ ನಂತರ ಅದನ್ನು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸುತ್ತಿರುವುದನ್ನು ಸ್ವಾಗತಿಸುವೆ’ ಎಂದು ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಪ್ರಕಟಣೆ ಹೊರಡಿಸಿದ್ದಾರೆ. `ವಿಧಾನಸಭೆಯ ಮಾಜಿ ಅಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸತತ ಪ್ರಯತ್ನದಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಸ್ ನಿಲ್ದಾಣ ಕಾಮಗಾರಿ ಮಂಜೂರಿಯಾಯಿತು. ಹಾಲಿ ಶಾಸಕ ಭೀಮಣ್ಣ ನಾಯ್ಕ ಅವಧಿಯಲ್ಲಿ ಪೂರ್ಣಗೊಂಡಿದೆ. ದಾಖಲೆಗಳ ಪ್ರಕಾರ 6 ನವೆಂಬರ್ 2024ರಂದು ಕಾಮಗಾರಿ ಮುಗಿದರೂ ನಾಲ್ಕುವರೆ ತಿಂಗಳ ನಂತರ ಉದ್ಘಾಟನೆ ಮಾಡಲಾಗುತ್ತಿದೆ’ ಎಂದವರು ವಿವರಿಸಿದ್ದಾರೆ.
`ಉದ್ಘಾಟನೆಗೆ ತಡವಾಗಿದ್ದರಿಂದ ಬೇಸಿಗೆಯಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಅದಾಗಿಯೂ ಆಳುವವರಿಗೆ ಜನರ ಸಮಸ್ಯೆ ಕಾಣಲಿಲ್ಲ. ಮಾರ್ಚ 18ರಂದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ ನಂತರ ಶಾಸಕ ಭೀಮಣ್ಣ ನಾಯ್ಕ ಉದ್ಘಾಟನೆಗೆ ಸಜ್ಜಾಗಿದ್ದಾರೆ. ಹೀಗಾಗಿ ಪ್ರತಿಭಟನೆ ಕೈ ಬಿಡಲಾಯಿತು’ ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
`ಬಸ್ ನಿಲ್ದಾಣ ಉದ್ಘಾಟನೆ ಮಾಡುತ್ತಿರುವುದು ಸಮಾಧಾನ ತಂದಿದೆ. ಆದರೆ, ಅಭಿವೃದ್ಧಿ ವಿಷಯದಲ್ಲಿ ಶಾಸಕರ ನಿಷ್ಕಾಳಜಿ ಸಹಿಸುವುದಿಲ್ಲ’ ಎಂದು ಅನಂತಮೂರ್ತಿ ಹೆಗಡೆ ಎಚ್ಚರಿಸಿದ್ದಾರೆ. `ಬಸ್ ನಿಲ್ದಾಣ ಕಾಮಗಾರಿ ಉದ್ಘಾಟಿಸಲು ಮನಸ್ಸು ಮಾಡಿದಕ್ಕಾಗಿ ಅವರು ಭೀಮಣ್ಣ ನಾಯ್ಕರನ್ನು ಅಭಿನಂದಿಸುವೆ’ ಎಂದು ಹೇಳಿದ್ದಾರೆ.







