ಮುಂಡಗೋಡದಲ್ಲಿ ನಿಯಮಬಾಹಿರವಾಗಿ ಆಸ್ಪತ್ರೆ ನಡೆಸುವವರ ಸಂಖ್ಯೆ ಹೆಚ್ಚಿದೆ. ವಾರದ ಹಿಂದೆ ನಕಲಿ ವೈದ್ಯರೊಬ್ಬರನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಇದೀಗ ಇನ್ನಷ್ಟು ಅನಧಿಕೃತ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದಾರೆ.
ಮುಂಡಗೋಡು ಗ್ರಾಮೀಣ ಪ್ರದೇಶಗಳಲ್ಲಿ ಕೆಪಿಎಂಇ ಕಾಯ್ದೆ ಅಡಿ ಪರವಾನಿಗೆ ಪಡೆದಯೇ ಕ್ಲಿನಿಕ್ ಹಾಗೂ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದವರ ಮೇಲೆ ಅಧಿಕಾರಿಗಳು ಕಠಿಣ ಕ್ರಮ ಜರುಗಿಸಿದ್ದಾರೆ. ಔಷಧಿ ಅಂಗಡಿಯಲ್ಲಿ ಕಿರಾಣಿ ಸಾಮಗ್ರಿ ಮಾರಾಟ ಮಾಡುತ್ತಿದ್ದ ವಿಚಿತ್ರ ವಿದ್ಯಮಾನವೊಂದು ಈ ವೇಳೆ ಬೆಳಕಿಗೆ ಬಂದಿದೆ.
ಗುರುವಾರ ವಿವಿಧ ಕಡೆ ದಾಳಿ ನಡೆಸಿದ ಅಧಿಕಾರಿಗಳು ಒಟ್ಟು 7 ಕ್ಲಿನಿಕ್’ಗಳಿಗೆ ಬಾಗಿಲು ಹಾಕಿದ್ದಾರೆ. ಕಾತೂರನಲ್ಲಿ ಆರ್ ಜಿ. ಪೂಜಾರ್ ಮಾಲಕತ್ವದ ಅನಧಿಕೃತ ಕ್ಲಿನಿಕ್, ಗಣೇಶಪುರ ಬಾಡಿಗೆ ಮನೆಯಲ್ಲಿ ಯಾವುದೇ ವಿದ್ಯಾರ್ಹತೆ ಹೊಂದದ ಗೋಪಾಲ ಬೆನ್ನೂರು ಅನಧಿಕೃತ ಕ್ಲಿನಿಕ್ ಹಾಗೂ ಕಾವಲಕೊಪ್ಪ ಗ್ರಾಮದಲ್ಲಿ ಬಸವರಾಜ ಹಡಪದ ಎಂಬುವರ ಅನಧಿಕೃತ ಕ್ಲಿನಿಕ್ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಮಳಗಿ ಗ್ರಾಮದ ಶ್ರೀ ಚನ್ನಬಸವೇಶ್ವರ ಮೆಡಿಕಲ್ ಮತ್ತು ಜನರಲ್ ಸ್ಟೋರ್ ಹಾಗೂ ರೇಣುಕಾ ಮೆಡಿಕಲ್ ಮತ್ತು ಜನರಲ್ ಸ್ಟೋರ್ನವರು ಮೆಡಿಕಲ್ ಸ್ಟೋರ್ನಲ್ಲಿ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿದ್ದರಿಂದ ಬೀಗ ಹಾಕಲಾಗಿದೆ. ಕೋಡಂಬಿ ಹಾಗೂ ಪಾಳಾ ಗ್ರಾಮದಲ್ಲಿ ಅಮರ ಶಿಂಧೆ ಅವರ ಅನಧಿಕೃತ ಗುರು ಕ್ಲಿನಿಕ್, ಕೋಡಂಬಿಯ ಅಹ್ಮದಸಾಬ್ ಅವರ ಮನೆಯ ಪಕ್ಕ ಅನಧಿಕೃತ ಕ್ಲಿನಿಕ್ ಬಂದ್ ಮಾಡಲಾಗಿದೆ.
ಈ ದಾಳಿಯಲ್ಲಿ ಕೆಪಿಎಮ್ಇ. ಪ್ರಾಧಿಕಾರ ತಂಡದ ತಾಲೂಕ ಆರೋಗ್ಯಾಧಿಕಾರಿ ನರೇಂದ್ರ ಪವಾರ, ಐಎಮ್ಎ ಮುಂಡಗೋಡ ಅಧ್ಯಕ್ಷ ಡಾ ರವಿ ಹೆಗಡೆ, ವೈದ್ಯಾಧಿಕಾರಿಗಳಾದ ಸಂಜೀವ ಗಲಗಲಿ, ಭರತ ಡಿ ಟಿ ಹಾಗೂ ಪೋಲಿಸ ಸಿಬ್ಬಂದಿ ಭಾಗವಹಿಸಿದ್ದರು.







